ಮೈಸೂರು: ಮುಡಾ ಹಗರಣ ರಾಷ್ಟ್ರವ್ಯಾಪಿ ಸದ್ದು ಮಾಡಿದೆ. ಮುಡಾ ಹಗರಣದ ವಿಚಾರವಾಗಿ ರಾಜಕೀಯ ಜಟಾಪಟಿ ಜೋರಾಗಿದೆ. ಇದರ ಬೆನ್ನಲ್ಲೇ 8 ಲಕ್ಷ ದಾಖಲಾತಿ ನೀಡುವಂತೆ ಜಸ್ಟಿಸ್ ದೇಸಾಯಿ ಆಯೋಗದಿಂದ ಮುಡಾಗೆ ಸೂಚನೆ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. 8 ಲಕ್ಷ ದಾಖಲಾತಿ ನೀಡುವಂತೆ ಸೂಚಿಸಿರುವ ಜಸ್ಟಿಸ್ ದೇಸಾಯಿ ಆಯೋಗ, ಎಲ್ಲಾ ದಾಖಲೆಗಳು ಸರ್ಟಿಫೈಡ್ ಆಗಿರಬೇಕು ಎಂದು ತಾಕೀತು ಮಾಡಿದೆ.
2005 ರಿಂದ 2024ರ ವರೆಗೆ 50:50 ಅನುಪಾತದಡಿ ಹಂಚಿಕೆಯಾದ ನಿವೇಶನಗಳಿಗೆ (50:50 Site) ಸಂಬಂಧಿಸಿದ ದಾಖಲೆಗಳು, ಪ್ರೋತ್ಸಾಹದಾಯಿಕ ನಿವೇಶನ ಹಾಗೂ ಬದಲಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಸಮಗ್ರವಾಗಿ ನೀಡುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಡಾ 19 ಲಕ್ಷ ರೂ. ಮೌಲ್ಯದ 9 ಹೊಸ ಜೆರಾಕ್ಸ್ ಮೆಷಿನ್ ಖರೀದಿಸಿದೆ.
Navratri 2024: ನವರಾತ್ರಿಯ ಐದನೇ ದಿನ: “ಸ್ಕಂದಮಾತೆ”ಯ ಹಿನ್ನೆಲೆಯೇನು.? ಪೂಜೆ ಹೇಗೆ.? ಮಹತ್ವವೇನು..?
ಈಗಾಗಲೇ ಮೂಡಾ ಬಳಿ 4 ಹಳೆಯ ಜೆರಾಕ್ಸ್ ಮೆಷಿನ್ಗಳಿದ್ದು, ಇದರೊಂದಿಗೆ ಹೆಚ್ಚುವರಿ 9 ಜೆರಾಕ್ಸ್ ಮಿಷನ್ಗಳನ್ನು ಖರೀದಿ ಮಾಡಿದೆ. ಒಟ್ಟು 13 ಜೆರಾಕ್ಸ್ ಮಿಷಿನ್ಗಳಲ್ಲಿ ದಾಖಲಾತಿ ತೆಗೆಯುವ ಕೆಲಸ ನಡೆಯುತ್ತಿದೆ. ಜೆರಾಕ್ಸ್ ಮಿಷಿನ್ ಖರೀದಿ ಮಾಡಿರುವ ಬಿಲ್ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಜಸ್ಟೀಸ್ ದೇಸಾಯಿ ಆಯೋಗಕ್ಕೆ ಅಲ್ಲದೇ ಲೋಕಾಯುಕ್ತಕ್ಕೂ ದಾಖಲೆಗಳ 1 ಪ್ರತಿ ನೀಡಬೇಕಿದೆ ಎಂದು ತಿಳಿದುಬಂದಿದೆ.
14 ನಿವೇಶನ ಮಹಜರು:
ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನೀಡಿದ್ದ ವಿಜಯನಗರದ 3 ಮತ್ತು 4ನೇ ಹಂತದಲ್ಲಿ ನೀಡಿದ್ದ 14 ನಿವೇಶನಗಳನ್ನು ಈಗಾಗಲೇ ವಾಪಸ್ ನೀಡಿದ್ದಾರೆ. ಈ ನಡುವೆಯೆ ಅದರ ತನಿಖೆ ತೀವ್ರಗೊಳ್ಳುತ್ತಿದ್ದು, ಲೋಕಾಯುಕ್ತ ಪೊಲೀಸರು ಶುಕ್ರವಾರ 14 ಸೈಟುಗಳ ಮಹಜರು ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಟಿ.ಜೆ ಉದೇಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದೂರುದಾರ ಸ್ನೇಹಮಹಿ ಕೃಷ್ಣ ಸಮಕ್ಷಮದಲ್ಲೇ ಸ್ಥಳ ಮಹಜರು ನಡೆಸಿದ್ದಾರೆ. ಈ ಸೈಟ್ ಗಳ ನಕ್ಷೆಯನ್ನು ಇಟ್ಟುಕೊಂಡು ಇವುಗಳ ಮಹಜರ್ ಮಾಡಲಾಗಿದೆ.