ಬಾಗಲಕೋಟೆ: ಠಾಕು,ಠೀಕಿನ ನಡಿಗೆ. ಕೈಲೊಂದು ಬೆತ್ತ, ತೆಲೆ ಮೇಲೆ ಟೋಪಿ ಧರಿಸಿ,ಗಂಭೀರತೆಯಿಂದ ಕರಾರುವಕ್ಕಾಗಿ ಬಾಲಕರು ಹಾಕುತ್ತಿದ್ದ ಶಿಸ್ತುಬದ್ಧ ಹೆಜ್ಜೆ…!
ಅ.6 ರಂದು ಬಾಗಲಕೋಟ ನಗರದಲ್ಲಿ ನಡೆದ ಆರ್.ಎಸ್.ಎಸ್. ಪಥಸಂಚಲನದ ವೈಭವ ಎಲ್ಲರ ಗಮನ ಸೆಳೆಯಿತು. ಭಾನುವಾರ ವಿದ್ಯಾಗಿರಿಯಲ್ಲಿ ಬಾಲಕರಿಗಾಗಿ ಏರ್ಪಡಿಸಿದ್ದ ಪ್ರತ್ಯೇಕ ಪಥ ಸಂಚಲನ ಜನಾಕರ್ಷಣೆಗೆ ಪಾತ್ರವಾಯಿತು.ಬಾಗಲಕೋಟೆಯಲ್ಲಿ ನಡೆಯುವ ಆರ್ಎಸ್ಎಸ್ ಪಥ ಸಂಚಲನ ದೇಶದಲ್ಲೇ ಗಮನ ಸೆಳೆದಿದೆ.
ಕೆಲವು ವರ್ಷಗಳ ಹಿಂದೆ ಆರಂಭಗೊಂಡ ಬಾಲಕರ ಪಥ ಸಂಚಲನವು ಹೊಸ ಸಂಚಲನ ಸೃಷ್ಟಿಸುತ್ತಿದೆ. ವಿದ್ಯಾಗಿರಿಯ ಅಥಣಿ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ ಆರಂಭವಾದ ಪಥ ಸಂಚಲನಕ್ಕೆ ನೂರಾರು ಬಾಲಕರು ಪಾಲ್ಗೊಂಡಿದ್ದರು. ಬರೀ ಬಾಲಕರೇ ಹೆಜ್ಜೆ ಹಾಕುವುದನ್ನು ವೀಕ್ಷಿಸಲು ಸಾವಿರಾರು ಜನರು ಸೇರಿದ್ದರು.
ಪಥ ಸಂಚಲನ ಆರಂಭವಾಗುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಾರ್ಗದುದ್ದಕ್ಕೂ ಜನರು ರಸ್ತೆ, ಮನೆಗಳ ಮುಂದೆ ರಂಗೋಲಿ ಬಿಡಿಸಿದ್ದರು. ಸ್ವಾಗತ ಕಮಾನುಗಳನ್ನು ನಿಲ್ಲಿಸಿದ್ದರು. ಅಲ್ಲಲ್ಲಿ ಪುಠಾಣಿ ಮಕ್ಕಳು ದೇಶಭಕ್ತರು,ಮುಖಂಡರ ವೇಷಭೂಷಣ ಧರಿಸಿ ಸ್ವಾಗತಿಸಿದರು.
ಬಾಲಕರ ಪ್ರತ್ಯೇಕ ಪಥಸಂಚಲನ ನೋಡಲು ನಗರದ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನ ಆಗಮಿಸಿದ್ದರು.ಭಾರತ ಮಾತಾಕೀ ಜೈ.., ಭಜರಂಗಿ ಭಜರಂಗಿ.., ಜೋರಸೆ ಭೋಲೋ.. ಪ್ಯಾರಸೇ ಭೋಲೋ.ಎನ್ನುವ ಘೋಷನೆಗಳು ಮುಗಿಲು ಮುಟ್ಟಿದ್ದವು. ರಸ್ತೆ ಇಕ್ಕೇಲಗಳಲ್ಲಿ ನಿಂತಿದ್ದ ಸಾರ್ವಜನಿಕರು ಹೂ ಮಳೆಗೈದರು.