ಬೆಂಗಳೂರು: ನಾನು 14 ತಿಂಗಳಲ್ಲಿ ಮಾಡಿದ ಕೆಲಸ ಬಗ್ಗೆ ಸಿದ್ದರಾಮಯ್ಯಗೆ ಚಾಲೆಂಜ್ ಮಾಡ್ತೀನಿ. ಅವರೇನು ಮಾಡಿದ್ದಾರೆ ನಾನೇನು ಮಾಡಿದ್ದೀನಿ ಅಂತಾ ಚರ್ಚೆ ಆಗಲಿ. ಇದು ನನ್ನ ಓಪನ್ ಚಾಲೆಂಜ್ ಎಂದು ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಸವಾಲು ಹಾಕಿದರು.
ನಗರದಲ್ಲಿ ಮಾತನಾಡಿದ ಹೆಚ್ಡಿಕೆ, ಕೊಟ್ಟ ಕುದುರೆ ಏರದವನು ವೀರನೂ ಅಲ್ಲ ಶೂರನೂ ಅಲ್ಲ ಅಂದಿದ್ದಾರೆ. ಯಾವ ಕುದುರೆ ಕೊಟ್ಟಿದ್ರು ಅವರು ನನಗೆ? ನಾನು 14 ತಿಂಗಳಲ್ಲಿ ಮಾಡಿದ ಕೆಲಸ ಬಗ್ಗೆ ಸಿದ್ದರಾಮಯ್ಯಗೆ ಚಾಲೆಂಜ್ ಮಾಡ್ತೀನಿ. ನಾನು ಬಹಿರಂಗ ಸವಾಲು ಹಾಕ್ತೀನಿ ಸಿದ್ದರಾಮಯ್ಯಗೆ. ಅವರ ಈ 15 ತಿಂಗಳಲ್ಲಿ ಅವರೇನು ಮಾಡಿದ್ರು, ನಾನು 2018 ರಲ್ಲಿ 14 ತಿಂಗಳಲ್ಲಿ ಏನು ಕೆಲಸ ಮಾಡಿದ್ದೀನಿ. ಇವರ ಸಹಕಾರ ಸರಿಯಾಗಿರದಿದ್ದರೂ 14 ತಿಂಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೀನಿ. ಅವರೇನು ಮಾಡಿದ್ದಾರೆ, ನಾನೇನು ಮಾಡಿದ್ದೀನಿ ಅಂತಾ ಚರ್ಚೆ ಆಗಲಿ, ಇದು ನನ್ನ ಓಪನ್ ಚಾಲೆಂಜ್. ಚರ್ಚೆ ಮಾಡೋಣ, ಚರ್ಚೆಗೆ ನಾನು ಸಿದ್ಧ ಇದ್ದೀನಿ. ನಮ್ಮ 38 ಜನ ಶಾಸಕರು ಇದ್ರು, ನಿಮ್ಮ ಬೆಂಬಲ ಇರಲಿಲ್ಲ. ನೀವೇನು ನಡೆಸಿದ್ದೀರಿ, ಚರ್ಚೆ ಆಗಲಿ. ಇವತ್ತು ಹೇಳ್ತಿದ್ದೀರಲ್ಲ ಕುಮಾರಸ್ವಾಮಿ ಕೆಲಸ ಮಾಡಿಲ್ಲ ಅಂತಾ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದರು.
ಮಾತು ಮಾತಿಗೆ ಹೊಟ್ಟೆ ಉರಿ ಅಂತಿದ್ದಾರೆ. ಅವರೇ ಅವರ ಪತ್ನಿಯನ್ನು ಹೊರಗೆ ತಂದವರು. ಯಾರು ತಂದಿದ್ದು ಅವರನ್ನು ಹೊರಗೆ, ನೀವೇ. ಮನೆಯಲ್ಲಿ ಗೌರವದಿಂದ ಇದ್ದವರನ್ನು ಹೊರಗೆ ತಂದಿದ್ದು ಅವರು. ನಿಮ್ಮ ನಡವಳಿಕೆಯಿಂದ ಅವರು ಹೊರಗೆ ಬಂದಂತಾಗಿದೆ. ನೀವೇ ತಪ್ಪು ಮಾಡಿ ಇಂತಹ ವಿಷಯಗಳನ್ನೆಲ್ಲ ಯಾಕೆ ಜನರ ಮುಂದೆ ಹೇಳ್ತೀರ ಈಗ. ಮಾತೆತ್ತಿದರೆ ಅಹಿಂದ ಅಹಿಂದ ಅನ್ನುತ್ತಾರೆ. ಅಹಿಂದ ವರ್ಗಗಳಿಗೆ ಸಿದ್ದರಾಮಯ್ಯ ಏನು ಮಾಡಿದ್ದಾರೆ ಹೇಳಲಿ. ವಾಲ್ಮೀಕಿ ನಿಗಮದಲ್ಲಿ ಲೂಟಿ ಹೊಡೆದಿರೋದು ನೋಡಿದ್ದೀವಲ್ಲ ಎಂದು ಟಾಂಗ್ ಕೊಟ್ಟರು.