ಹಾಸನ:- ಆ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ಕೊಡದಿರಲು ನಿರ್ಧಾರ ಮಾಡಿದ್ದೇನು ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ಕೊಡಬಾರದು ಎಂದು ತೀರ್ಮಾನಿಸಿದ್ದೇನೆ. ಸತ್ಯ ಇದ್ದರೆ ಪ್ರತಿಕ್ರಿಯಿಸುವುದು ಒಳ್ಳೆಯದು ಎಂದರು.
ಸತ್ಯ ಇಲ್ಲದಿದ್ದಾಗ ನಾವೂ ಅವರ ತರಹ ಆಗಿಬಿಡ್ತೀವಿ. ಇಲ್ಲದಿದ್ದರೆ ಚೆಲುವರಾಯಸ್ವಾಮೀನೂ, ಕುಮಾರಸ್ವಾಮಿ ತರಹ ಆಗೋದ್ನಲ್ಲಾ ಅಂತಾರೆ ಜನ ಎಂದು ಲೇವಡಿ ಮಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿ, ಮಂತ್ರಿ ಆಗೋದು ಅಪರೂಪ. ಪೂರ್ವಜನ್ಮದ ಪುಣ್ಯದಿಂದ ಆಗಿದ್ದೇವೆ. ಅವರು ಎರಡು ಜನ ಗೆದ್ದು ಮಂತ್ರಿಯಾಗಿದ್ದಾರೆ. ಅವರಿಗೆ ಸಾಕಷ್ಟು ಕೆಲಸ ಇರುತ್ತೆ. ರಾಷ್ಟ್ರದಲ್ಲಿ ಮಂತ್ರಿಯಾಗಿರುವವರು ಶನಿವಾರ, ಭಾನುವಾರ ಇಲ್ಲಿಗೆ ಬಂದು ಬರೀ ಬಯ್ಯುವುದರಿಂದ ಅರ್ಥ ಇರದು ಎಂದು ಕುಟುಕಿದರು.
ಸಿದ್ದರಾಮಯ್ಯ ಅವರು ಆರ್ಡಿನರಿ ಲೀಡರ್ ಅಲ್ಲ. ಸಣ್ಣಪುಟ್ಟ ವ್ಯತ್ಯಾಸ ಅಥವಾ ಯಾರೋ ಮಾಡಿದ ನಿರ್ಧಾರಕ್ಕೆ ಅವರನ್ನೇ ಹೊಣೆ ಮಾಡುವುದು ಅಪರಾಧ. ಕುಮಾರಸ್ವಾಮಿ ಹದಿನಾಲ್ಕು ತಿಂಗಳು ಸಿಎಂ ಆಗಿದ್ದಾಗ ಏನು ಮಾಡಿದ್ರು ಒಮ್ಮೆ ತಿರುಗಿ ನೋಡಲಿ ಎಂದರು.