ಮೈಸೂರು:- ಇಂದಿನಿಂದ 9 ದಿನಗಳ ಕಾಲ ಮೈಸೂರು ನಗರ ಸ್ವರ್ಗದಂತೆ ಕಂಗೊಳಿಸುತ್ತದೆ. ಇದಕ್ಕೆ ಕಾರಣ ಇವತ್ತಿನಿಂದ ಆರಂಭವಾಗುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ. ಸಾಹಿತಿ ಹಂಪ ನಾಗರಾಜಯ್ಯ ಚಾಮುಂಡಿ ಸನ್ನಿಧಿಯಲ್ಲಿ ದಸರಾ ಉದ್ಘಾಟನೆ ಮಾಡಲಿದ್ದಾರೆ.
ಈಗಾಗಲೇ ತಾಯಿ ಚಾಮುಂಡಿ ಉತ್ಸವ ಮೂರ್ತಿ ಶುದ್ಧೀಕರಣ ಮಾಡಲಾಗಿದ್ದು ಕೆಂಪು ಬಣ್ಣದ ಸೀರೆಯಲ್ಲಿ ತಾಯಿ ಕಂಗೋಳಿಸುತ್ತಿದ್ದಾಳೆ. ಬೆಳಿಗ್ಗೆ ತಾಯಿ ಚಾಮುಂಡೇಶ್ವರಿಗೆ ವಿವಿಧ ಅಭಿಷೇಕ ಮಾಡಿದ ಬಳಿಕ ವಿಶೇಷ ಅಲಂಕಾರ ಮಾಡಿದ ಪೂಜಾ ಕೈಂಕರ್ಯಗಳನ್ನ ಮಾಡಲಾಗುತ್ತೆ. ಈ ಮೂಲಕ ಚಾಮುಂಡಿ ತಾಯಿಯ ಸನ್ನಿಧಿಯಲ್ಲಿ ದಸರಾದ ಧಾರ್ಮಿಕ ಕಾರ್ಯಗಳು ಆರಂಭವಾಗುತ್ತೆ.
ಇನ್ನೊಂದೆಡೆ ಚಾಮುಂಡಿ ಬೆಟ್ಟದಲ್ಲಿ ಸರ್ಕಾರದಿಂದ ಅಧಿಕೃತವಾಗಿ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಈಗಾಗಲೇ ಚಾಮುಂಡೇಶ್ವರಿ ದೇವಸ್ಥಾನದ ಪಕ್ಕದಲ್ಲಿ ಬೃಹತ್ ಜರ್ಮನ್ ಟೆಂಟ್ ಅಳವಡಿಸಲಾಗಿದ್ದು 2 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇಂದು ನಡೆಯುವ ಕಾರ್ಯಕ್ರಮದಲ್ಲಿ ಉದ್ಘಾಟಕರಾದ ಸಾಹಿತಿ ಹಂಪ ನಾಗರಾಜಯ್ಯ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಬೆಳಗ್ಗೆ 9.15 ರಿಂದ 9.45ರಲ್ಲಿ ಸಲ್ಲುವ ಶುಭ ಲಗ್ನದಲ್ಲಿ ಬೆಳ್ಳಿ ರಥದಲ್ಲಿ ವಿರಾಜಮಾನಳಾಗೋ ನಾಡದೇವತೆ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಗೆ ಪುಷ್ಟರ್ಚಾನೆ ಮಾಡುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ಸಿಗುತ್ತೆ.
ಚಾಮುಂಡಿ ತಾಯಿಗೆ ಸಾಹಿತಿ ಹಂಪ ನಾಗರಾಜಯ್ಯ ಪುಷ್ಪಾರ್ಚನೆ ಮಾಡಿದ ಬಳಿಕ ದಸರಾಗೆ ಅಧಿಕೃತ ಚಾಲನೆ ಸಿಕ್ಕಂತೆ ಆಗುತ್ತೆ. ಬಳಿಕ ಚಲನಚಿತ್ರೋತ್ಸವ, ಆಹಾರ ಮೇಳ, ಫಲ ಪುಷ್ಪ ಪ್ರದರ್ಶನ, ದಸರಾ ಕುಸ್ತಿ, ದಸರಾ ಸಿಎಂ ಕಪ್, ಪುಸ್ತಕ ಮೇಳ, ವಸ್ತು ಪ್ರದರ್ಶನ, ವಿದ್ಯುತ್ ದೀಪಾಲಂಕಾರಕ್ಕೆ ಸಿಎಂ ಹಾಗೂ ಸಂಬಂಧ ಪಟ್ಟ ಇಲಾಖೆಯ ಸಚಿವರು ಚಾಲನೆ ನೀಡಲಿದ್ದಾರೆ,