ಬೆಂಗಳೂರು:- ಸಿಗರೇಟ್, ಬೀಡಿ ತುಂಡುಗಳನ್ನು ಎಲ್ಲೆಂದರಲ್ಲಿ ಎಸೆಯುವವರಿಗೆ ಹೊಸ ನಿಯಮ ಶೀಘ್ರದಲ್ಲೇ ಜಾರಿಗೆ ಬರುವ ಸಾಧ್ಯತೆ ಇದೆ.
ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳ ಕಳ್ಳತನ: ರಾತ್ರೋ ರಾತ್ರಿ ಖದೀಮರ ಕೃತ್ಯ!
ನಗರದಾದ್ಯಂತ ಸಿಗರೇಟ್ ಹಾಗೂ ಬೀಡಿ ತುಂಡುಗಳನ್ನು ಬಿಸಾಡುವುದಕ್ಕೆಂದೇ ಪ್ರತ್ಯೇಕ ಬುಟ್ಟಿಗಳನ್ನು ಅಳವಡಿಸಲು ಬಿಬಿಎಂಪಿ ಮುಂದಾಗಿದೆ.
ಬೆಂಗಳೂರಿನಲ್ಲಿ ಪ್ರತಿದಿನ ಸಾವಿರಾರು ಸಿಗರೇಟ್ ತುಂಡುಗಳನ್ನು ವಿಲೇವಾರಿ ಮಾಡಲಾಗುತ್ತದೆ. ಅವುಗಳು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿದ್ದು ಅದು ಚರಂಡಿಗಳು, ಅಂತರ್ಜಲ, ಮಣ್ಣು ಮತ್ತು ಪರಿಸರವನ್ನು ಕಲುಷಿತಗೊಳಿಸುತ್ತವೆ. ಹೀಗಾಗಿ ನಗರದಲ್ಲಿ ಸಿಗರೇಟ್ ತುಂಡುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಅಗತ್ಯವಿದೆ. ಸಿಗರೇಟ್ ತುಂಡುಗಳಿಂದಾಗುವ ಅನಾಹುತಗಳನ್ನು ತಡೆಯಲು ಬಿಬಿಎಂಪಿಯು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿಯಂತೆ ತುಂಡುಗಳ ಸಂಗ್ರಹಕ್ಕೆ ಯೋಜನೆ ರೂಪಿಸಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಯೋಜನೆಯ ಭಾಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಪ್ರಮುಖ ಸಿಗರೇಟ್ ತಯಾರಕ ‘ಐಟಿಸಿ’ ಸಹಯೋಗದೊಂದಿಗೆ ಸಿಗರೇಟ್ ತುಂಡುಗಳ ಸಂಗ್ರಹಕ್ಕಾಗಿ ನಗರದ ಹಾಟ್ ಸ್ಪಾಟ್ಗಳಲ್ಲಿ ಪ್ರತ್ಯೇಕ ಡಸ್ಟ್ಬಿನ್ಗಳನ್ನು ಇರಿಸಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ನಂತರ ಸಿಗರೇಟ್ ಹಾಗೂ ಬೀಡಿಯ ತುಂಡುಗಳನ್ನು ತ್ಯಾಜ್ಯದಿಂದ ಇಂಧನ ಉತ್ಪಾದನೆ ಅಥವಾ ಸಹ-ಸಂಸ್ಕರಣೆಯಂತಹ ವಿಧಾನಗಳ ಮೂಲಕ ಮರುಬಳಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸಿಗರೇಟ್ ಹಾಗೂ ಬೀಡಿಯ ತುಂಡುಗಳನ್ನು ಮರುಬಳಕೆ ಮಾಡುವ ಜವಾಬ್ದಾರಿ ತಯಾರಕರ ಮೇಲಿದೆ. ಇದಕ್ಕೆ ತಯಾರಕ ಕಂಪನಿಗಳು ಈ ಹಿಂದಿನ ಸಭೆಯಲ್ಲಿ ಸಮ್ಮತಿ ಸೂಚಿಸಿವೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಸಿಗರೇಟ್ ತುಂಡುಗಳ ವೈಜ್ಞಾನಿಕ ಸಂಗ್ರಹಣೆ ವಿಳಂಬವಾಗಿರುವುದು ನಿಜ ಎಂದು ಬಿಬಿಎಂಪಿ ಒಪ್ಪಿಕೊಂಡಿದೆ. ಇದಕ್ಕೆ ಸಿಗರೇಟ್ ತಯಾರಕರನ್ನು ದೂಷಿಸಿದೆ. ಬೆಂಗಳೂರಿನ ಎರಡು ವಾರ್ಡ್ಗಳಲ್ಲಿ ಪ್ರಾಯೋಗಿಕವಾಗಿ ತುಂಡುಗಳ ವಿಲೇವಾರಿಗಾಗಿ ಮೈಕ್ರೋ ಯೋಜನೆ ಕೈಗೊಳ್ಳುವಂತೆ ಐಟಿಸಿಗೆ ಪತ್ರವನ್ನೂ ಬಿಬಿಎಂಪಿ ಬರೆದಿದೆ.