ಬೆಂಗಳೂರು:- ಇಂದು ಬೆಳ್ಳಂ ಬೆಳಗ್ಗೆ ಬಿಡಿಎ ಜಾಗದಲ್ಲಿ ಬುಲ್ಡೋಜರ್ ಸದ್ದು ಮಾಡಿದ್ದು, ಅಕ್ರಮ ಅಂಗಡಿ-ಮುಂಗಟ್ಟುಗಳು ಧೂಳಿಪಟವಾಗಿವೆ.
ಈ ರಾಶಿಯ ಹುಡುಗರು ತುಂಬಾ ರೊಮ್ಯಾಂಟಿಕ್: ಪತ್ನಿ ಬೇಕು ಅಂದಿದ್ದನ್ನು ಇಲ್ಲ ಅನ್ನಲ್ಲ!
ಬೆಳ್ಳಂಬೆಳಿಗ್ಗೆ ಬಿಡಿಎ ಜೆಸಿಬಿಗಳು ನಾಗರಬಾವಿ ಸಮೀಪದ ಚಂದ್ರ ಲೇಔಟ್ನಲ್ಲಿ ಘರ್ಜಿಸಿದ ಎಫೆಕ್ಟ್ಗೆ ನಿನ್ನೆ ಇದ್ದ ಅಂಗಡಿಗಳೆಲ್ಲ ಇಂದು ನೆಲಸಮವಾಗಿ ಬಿಟ್ಟಿವೆ. ಬಿಡಿಎ ಜಾಗದಲ್ಲಿದ್ದ 40ಕ್ಕೂ ಹೆಚ್ಚು ಅಂಗಡಿ-ಮುಂಗಟ್ಟುಗಳನ್ನ ಬಿಡಿಎ ಕ್ಷಣ ಮಾತ್ರದಲ್ಲಿ ನೆಲಸಮ ಮಾಡಿದ್ದು, ಬಿಡಿಎ ಇತಿಹಾಸದಲ್ಲೇ ಅತಿದೊಡ್ಡ ಡೆಮಾಲಿಷನ್ ಮಾಡಿ ಕಟ್ಟಡಗಳನ್ನ ಧರೆಗುರುಳಿಸಿದೆ. ಬಂಡವಾಳ ಹಾಕಿ ಲಾಭದ ನಿರೀಕ್ಷೆಯಲ್ಲಿ ಅಂಗಡಿ ತೆಗೆದಿದ್ದವರು ಕಣ್ಣ ಮುಂದೆಯೇ ಕಟ್ಟಡಗಳು ಧ್ವಂಸವಾಗುತ್ತಿದ್ದರೂ ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿತ್ತು.
ಅಂದಹಾಗೇ ಒಂದಲ್ಲ, ಎರಡಲ್ಲ 9 ಎಕರೆ 13 ಗುಂಟೆಯ ಬಿಡಿಎ ಜಾಗ. ತನ್ನದೇ ಜಾಗವನ್ನ ಖಾಸಗಿ ವ್ಯಕ್ತಿ ಕಬ್ಜ ಮಾಡಿದ್ದು ಕೋರ್ಟ್ ಅಂಗಳದಲ್ಲಿ ಹಲವು ವರ್ಷಗಳಿಂದ ಜಾಗ ವಿವಾದದಲ್ಲಿತ್ತು. ವಿವಾದದ ಭೂಮಿ ಬಿಡಿಎಗೆ ಸೇರಿದೆ ಅಂತಾ ಆದೇಶ ಬಂದಿದ್ದೆ ತಡ ಪೊಲೀಸರ ಜೊತೆ ಎಂಟ್ರಿಕೊಟ್ಟ ಬಿಡಿಎ ಅಧಿಕಾರಿಗಳು ಸರ್ವೇ ನಂಬರ್ 78ರಲ್ಲಿದ್ದ 9 ಎಕರೆ ಜಾಗದ 500 ಕೋಟಿ ರೂ. ಮೌಲ್ಯದ ಜಾಗವನ್ನ ತೆಕ್ಕೆಗೆ ಪಡೆದುಕೊಂಡಿದೆ. ಬಿಡಿಎ ಎಇ ರವಿಕುಮಾರ್, ಬಿಡಿಎ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಿಡಿಎ ಜಾಗವನ್ನ ಬಿಡಿಎ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಸದ್ಯ ಬಿಡಿಎ ಕಾರ್ಯಾಚರಣೆಯಿಂದ 40ಕ್ಕೂ ಹೆಚ್ಚಿನ ಅಂಗಡಿ-ಮುಂಗಟ್ಟುಗಳು ನೆಲಕ್ಕುರುಳಿವೆ. ಇತ್ತ ತೆರವು ಮಾಡಲು ಮೊದಲೇ ನೋಟಿಸ್ ಕೊಟ್ಟಿದ್ದೇವೆ ಎನ್ನುವುದು ಬಿಡಿಎ ವಾದವಾದರೆ, ಇತ್ತ ವ್ಯಾಪಾರಿಗಳು ಮಾತ್ರ ಬಿಬಿಎಂಪಿ ಲೈಸೆನ್ಸ್ , ಫುಡ್ ಲೈಸೆನ್ಸ್ , ಎಲ್ಲಾ ಇದ್ದೂ ನಮಗೆ ಕೊಟ್ಟ ಕಾಲಾವಶಕ್ಕಿಂತ ಮೊದಲೇ ಡೆಮಾಲಿಶ್ ಮಾಡುತ್ತಿದಾರೆ ಅಂತಾ ಗೋಳಾಡಿದ್ದಾರೆ. ತೆರವು ಮಾಡಲಿ ಆದರೆ ಅಂಗಡಿಯಲ್ಲಿದ್ದ ವಸ್ತುಗಳನ್ನ ಸಾಗಿಸುವುದಕ್ಕೆ ಸ್ವಲ್ಪ ಸಮಯ ಕೊಡಬೇಕಿತ್ತು. ಈಗ ಸಾವಿರಾರು ರೂಪಾಯಿ ನಷ್ಟವಾಗಿದೆ ಎಂದು ವ್ಯಾಪಾರಿ ಜುಬೇರ್ ಅಳಲು ತೋಡಿಕೊಂಡಿದ್ದಾರೆ.
ಬಿಡಿಎ ಮತ್ತು ಖಾಸಗಿ ವ್ಯಕ್ತಿಗಳ ನಡುವಿನ ಜಟಾಪಟಿಯಿಂದ ದಿನದ ಲಾಭದ ಲೆಕ್ಕಾಚಾರ ಹಾಕಿ ತಿಂಗಳ ಖರ್ಚು ನಿಭಾಯಿಸುತ್ತಿದ್ದ ವ್ಯಾಪಾರಸ್ಥರ ಬದುಕು ಬೀದಿಗೆ ಬಂದಿದೆ.