ಬೆಂಗಳೂರು: ತಿರುಪತಿ ಲಡ್ಡು (Tirupati Laddu) ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಅರ್ಚಕರು ಸಂಪ್ರೋಕ್ಷಣೆ ಮಾಡಿ ಶುದ್ಧೀಕರಣ ಮಾಡಿದರು. ಆಗಮಶಾಸ್ತ್ರದಂತೆ ಶುದ್ಧಿಕಾರ್ಯ (Ritualistic Cleansing) ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಲಡ್ಡು ವಿವಾದ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ಇಂದು ಭಕ್ತರಿಗಿಲ್ಲ ದರ್ಶನ!
ಬೆಳಗ್ಗೆ 10:30 ರಿಂದ ಆರಂಭವಾಗಿರುವ ಶುದ್ಧಿಕಾರ್ಯ ಸಂಜೆ 4:30ರ ವೇಳೆಗೆ ಮುಕ್ತಾಯಗೊಳ್ಳಲಿದೆ. ಸಂಜೆ 6:30ರ ಬಳಿಕ ಭಕ್ತರು ಎಂದಿನಂತೆ ದೇವರ ದರ್ಶನ ಪಡೆಯಬಹುದಾಗಿದೆ. ಲಡ್ಡು ಕೌಂಟರ್ ಸಹ 6 ಗಂಟೆಯ ನಂತರ ಓಪನ್ ಇರಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ಒಂದು ದಿನದ ಹಿಂದೆಯಷ್ಟೇ ತಿರುಮಲದ ದೇವಾಲಯದ ಸುತ್ತ ಅರ್ಚಕರು ಸಂಪ್ರೋಕ್ಷಣೆ ಮಾಡಿದ್ದರು. ಹಾಲು, ತುಪ್ಪ, ಮೊಸರು, ಗಂಜಲ, ಸಗಣಿ ಬಳಸಿ ದೇವಾಲಯ ಶುದ್ಧೀಕರಣ ಮಾಡಿದ್ದರು. ಈ ಬೆನ್ನಲ್ಲೇ ಬೆಂಗಳೂರಿನಲ್ಲೂ ಶುದ್ಧೀಕರಣ ಕಾರ್ಯ ನಡೆದಿದೆ.
ಈ ಕುರಿತು ಮಾತನಾಡಿರುವ ಟಿಟಿಡಿ ಸಿಬ್ಬಂದಿ, ಈ ಹಿಂದೆ ಕಡಿಮೆ ಲಡ್ಡು ಸೇಲ್ ಆಗ್ತಿತ್ತು. ಇದೀಗ ಹೆಚ್ಚು ಲಡ್ಡನ್ನು ಭಕ್ತರು ತೆಗೆದುಕೊಂಡು ಹೋಗ್ತಿದ್ದಾರೆ. ಯಾರು ತಿರುಪತಿಯಲ್ಲಿ ಆದ ಘಟನೆ ಬಗ್ಗೆ ಕೇಳ್ತಿಲ್ಲ. ಲಡ್ಡು ತೆಗೆದುಕೊಂಡು ಹೋಗ್ತಿದ್ದಾರೆ. ಪ್ರತಿನಿತ್ಯ ಒಂದು ಸಾವಿರ ಲಡ್ಡು ಮಾರಾಟವಾಗ್ತಿದೆ ಎಂದು ಹೇಳಿದ್ದಾರೆ.