ಕೋಲಾರ ; ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ದಾನಿಗಳ ಸಹಾಯವನ್ನು ಪಡೆದು, ಮುಂದಿನ ದಿನಗಳಲ್ಲಿ ಸಮಾಜ ಸೇವಕರ ಸ್ಪೂರ್ತಿ ಮತ್ತು ಪ್ರೇರಣೆಯಿಂದ ಉತ್ತಮ ವ್ಯಕ್ತಿಗಳಾಗಿ ಸಮಾಜದಲ್ಲಿ ನಿಲ್ಲುವುದಕ್ಕೆ ಸಹಕಾರಿಯಾಗುತ್ತದೆ ಎಂದು ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಹೇಳಿದರು.
ತಾಲೂಕಿನ ರಾಜಕಲ್ಲಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಹಾಗೂ ಶ್ರೀ ಸಿದ್ದಗಂಗಾ ಮಠದ ಹಳೆ ವಿದ್ಯಾರ್ಥಿ ಒಕ್ಕೂಟ ಆಶ್ರಯದಲ್ಲಿ ನಡೆದ ಕುವೆಂಪು ರಂಗ ಮಂಟಪ ಶಾಲಾ ಶತಮನೋತ್ಸವ ಹಾಗೂ ಗುರು ವಂದನದ ಸವಿ ನೆನಪು ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಾನಿಗಳ ಸೇವೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ಸದುಪಯೋಗ ಪಡಿಸಿಕೊಂಡು, ನಮ್ಮ ಶಾಲೆ ನಮ್ಮ ಗ್ರಾಮ ಎನ್ನುವ ಜವಾಬ್ದಾರಿಯಿಂದ ದೊಡ್ಡ ಮಟ್ಟದಲ್ಲಿ ಅವಕಾಶವಾಗುತ್ತದೆ, ಈ ನಿಟ್ಟಿನಲ್ಲಿ ದಾನಿಗಳು ನೀಡುವ ಸೌಲಭ್ಯಗಳನ್ನು ಪಡೆದುಕೊಂಡು, ಮುಂದೆ ಉತ್ತಮ ಭವಿಷ್ಯತಿಗಾಗಿ ಮುಂದಾಗಬೇಕು ಎಂದರು.
ಜನ್ಮ ನೀಡಿದ ಪೋಷಕರು, ವಿದ್ಯೆ ನೀಡಿದ ಗುರುಗಳು, ಆಸರೆ ನೀಡಿದ ಶಾಲೆಗಳನ್ನು ಯಾವೊಬ್ಬ ವಿದ್ಯಾರ್ಥಿಯು ಸಹ ಸಮಾಜದಲ್ಲಿ ಮರೆಯುವ ಕೆಲಸವನ್ನು ಮಾಡಬಾರದು ಎಂದು ಕಿವಿ ಮಾತು ಹೇಳಿದರು. ತುಮಕೂರು ಸಿದ್ದಗಂಗಾ ಮಠದ ಡಾ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಶಿಕ್ಷಣ ಕ್ರಾಂತಿಗಾಗಿ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ದವಸ ಧಾನ್ಯಗಳನ್ನು ಪಡೆದು ಮಕ್ಕಳಿಗೆ ಶಿಕ್ಷಣ ನೀಡುವ ಪ್ರವೃತ್ತಿಯನ್ನು ಮಾಡಿದ್ದು, ಕೋಲಾರ ತಾಲೂಕಿನ ರಾಜಕಲ್ಲಳ್ಳಿ ಗ್ರಾಮದಲ್ಲಿ ಇಂದು ದೊಡ್ಡ ಮಟ್ಟದಲ್ಲಿ ಉದ್ಯಮಿಗಳಾಗಿ ಸಿದ್ದಗಂಗಾ ಮಠ ದೊಂದಿಗೆ ನಿರಂತರವಾದ ಸಂಪರ್ಕ ಬಳಸಿಕೊಂಡು, ಅಕ್ಷರ ಸೇವೆಗೆ ಕೈಜೋಡಿಸಿರುವುದು ಮೆಚ್ಚುಗೆ ವಿಷಯವಾಗಿದೆ ಎಂದರು.
ನಾನು ಸಹ ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡುತ್ತೇನೆ, ಅಲ್ಲಿ ದೊಡ್ಡ ಮಟ್ಟದ ಆಶೀರ್ವಾದ ಸಿಗುತ್ತದೆ.
ಮನಸ್ಸಿಗೆ ನೆಮ್ಮದಿ ನೀಡುವ ಮಠಗಳು ಮತ್ತಷ್ಟು ಬೆಳೆಯಬೇಕು, ಇದಕ್ಕೆ ಪ್ರತಿಯೊಬ್ಬರು ಸಹ ಅನ್ನದಾನ ಸೇವೆಗೆ ಆದ್ಯತೆಯನ್ನು ನೀಡುವ ಮೂಲಕ ಸ್ವಾಮೀಜಿಯನ್ನು ನೆನೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಆಗಬೇಕು. ಇಂತಹ ಶಿಕ್ಷಣ ಸಂಸ್ಥೆಗಳನ್ನು ಪ್ರೇರೇಪಿಸುವ ಕಾರ್ಯವಾಗಬೇಕು ಎಂದರು.
ಇನ್ನು ತುಮಕೂರು ಸಿದ್ದಗಂಗಾ ಮಠದಲ್ಲಿ ಸಾವಿರಾರು ಮಂದಿ ಬಡ ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದು , ಮಕ್ಕಳಿಗೆ, ಶಿಕ್ಷಣವನ್ನು ಕೊಡಿಸಲು ಮಠದೊಂದಿಗೆ ಕೈಜೋಡಿಸಿ ಅನ್ನದಾಸೋಹ ಸೇವೆಗೆ ಮುಂದಾಗೋಣ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಂಡಿಗೆರೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಿ ಸಚ್ಚಿದಾನಂದ ಮೂರ್ತಿ, ಗಾಜಲವಾರಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ನಂಜುಂಡ ಗೌಡ ವೈ ಎಂ, ಪ್ರಥಮ ದರ್ಜೆ ಗುತ್ತಿಗೆದಾರ ರಮೇಶ್ ಎಂ ಎನ್, ಎಸ್ ಎಸ್ ಎಲ್ ವಿ ಟೈಲ್ಸ್ ಪ್ರೈವೇಟ್ ಲಿಮಿಟೆಡ್ ಮಾಲೀಕ ಜನಾರ್ದನ್ ಗೌಡ ಕೆ , ಸಾಹಿತ್ಯ ಮತ್ತು ಸಂಶೋಧನ ಕೇಂದ್ರದ ಡಾ. ಸಿದ್ದಲಿಂಗಪ್ಪ ಎಸ್ ದೇಶಮುಕ್, ಸೈಂಟ್ ಕ್ಲಾರೆಟ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಮುನಿರಾಜು ಎಂ ಜಿ, ಸಿದ್ದಗಂಗಾ ಮಠದ ಹಳೆ ವಿದ್ಯಾರ್ಥಿಗಳ ಒಕ್ಕೂಟದ ಮುಖ್ಯಸ್ಥ ಸುರೇಶ್ ಎಂ, ಈರೇಗೌಡ ಕೆ ಸತ್ಯ ವಾರ, ಮಂಜುನಾಥ್ ಕೆಬಿ, ಮಂಜುನಾಥ್ ಬಿ, ಗ್ರಾಮಸ್ಥರು ರೈತರು ಇದ್ದರು.