ಬೆಂಗಳೂರು: ಶಾಸಕ ಮುನಿರತ್ನ ತಪ್ಪು ಮಾಡಿದ್ರೆ ಕಾನೂನು ಪ್ರಕಾರ ತನಿಖೆಯಾಗಿ ಶಿಕ್ಷೆ ಆಗಲಿ. ಆದರೆ ಈ ಸರ್ಕಾರ ತಮ್ಮ ತಪ್ಪು ಮುಚ್ಚಿಕೊಳ್ಳಲು ಟಾರ್ಗೆಟ್ ರಾಜಕೀಯ ಮಾಡ್ತಿದೆ ಎಂದು ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಗರದ ಜೆಪಿ ಭವನದಲ್ಲಿ ಮಾತನಾಡಿದ ಅವರು, ಮುನಿರತ್ನ ಕೇಸ್ ವಿಚಾರವಾಗಿ ತನಿಖೆ ಆಗುತ್ತಿದೆ. ತನಿಖೆ ನಡೆಯುವ ಸಮಯದಲ್ಲಿ ಮಾತನಾಡುವುದು ಸರಿಯಲ್ಲ. ತನಿಖೆಯಾಗಲು ಸತ್ಯಾಸತ್ಯತೆ ಹೊರಗೆ ಬರಲಿ. ಕಾನೂನಿಗಿಂತ ಯಾರು ದೊಡ್ಡವರು ಅಲ್ಲ. ನೆಲದ ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು ಎಂದು ಪ್ರತಿಕ್ರಿಯಿಸಿದರು.
ಪರಶುರಾಮ್ ಕೇಸ್ನ್ನು ಮುಚ್ಚಿ ಹಾಕಲು ಸರ್ಕಾರ ಹೇಗೆ ಪ್ರಯತ್ನ ಮಾಡಿತ್ತು ಎಂದು ಎಲ್ಲರಿಗೂ ಗೊತ್ತಿದೆ. ವಾಲ್ಮೀಕಿ ಹಗರಣ ಕೇಸ್ನಲ್ಲಿ ನಾಗೇಂದ್ರ ವಿಚಾರಕ್ಕೆ ಸಂಬಂಧಿಸಿದಂತೆ ಈ ಸರ್ಕಾರ ಹೇಗೆ ತನಿಖೆ ಮಾಡಿತು ಎಂದು ಜಗಜ್ಜಾಹೀರಾಗಿದೆ. ಮುನಿರತ್ನ ವಿಚಾರದಲ್ಲಿ ಎಫ್ಎಸ್ಎಲ್ ವರದಿ ಬರಬೇಕು. ಅವರ ಧ್ವನಿಯೋ ಅಲ್ಲವೋ ಎಂದು ತಿಳಿಯಬೇಕು. ಮುನಿರತ್ನ ಅವರನ್ನು ತರಾತುರಿಯಲ್ಲಿ ಬಂಧನ ಮಾಡಿದ್ದಾರೆ. ಇದನ್ನು ನೋಡಿದರೆ ರಾಜ್ಯ ಸರ್ಕಾರ ಟಾರ್ಗೆಟ್ ರಾಜಕೀಯ ಮಾಡುತ್ತಿದೆ ಎಂದು ಅನ್ನಿಸುತ್ತಿದೆ ಎಂದರು.