ಬೆಂಗಳೂರು: ನಾಗಮಂಗಲದ ಪ್ರಕರಣದ ಕುರಿತು ನಾನು ಒಂದು ಟ್ವೀಟ್ ಮಾಡಿದ್ದೆ. ಅದನ್ನೇ ದ್ವೇಷವಾಗಿ ತೆಗೆದುಕೊಂಡು ನನ್ನ ಹಾಗೂ ಶೋಭಾ ಕರಂದ್ಲಾಜೆ ಮೇಲೆ ಎಫ್ಐಆರ್ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ನಡೆಯನ್ನು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಖಂಡಿಸಿದರು.
ಗಣೇಶೋತ್ಸವ ಮೆರವಣಿಗೆ ವೇಳೆ ದಾವಣಗೆರೆಯಲ್ಲಿ ಕಲ್ಲು ತೂರಾಟ ನಡೆದಿರುವುದು ಮತ್ತು ಮಂಡ್ಯದ ನಾಗಮಂಗಲ ಘಟನೆ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ ನಾಯಕರಾದ ಆರ್ ಅಶೋಕ್ ಮತ್ತು ಶೋಭಾ ಕರಂದ್ಲಾಜೆ ವಿರುದ್ಧ ಎಫ್ಐಆರ್ ದಾಖಲಿಸಿರುವ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಕುರಿತು ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿರುವ ಅವರು, ಕೇರಳದಿಂದ ಬಂದು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದರು. ಅದೇ ರೀತಿ ನಾಗಮಂಗದಲ್ಲಿ ಘೋಷಣೆ ಕೂಗಿದ್ದರು. ವಿಧಾನಸೌಧದಲ್ಲಿ ಕೂಗಿರುವುದನ್ನು ಆ ರೀತಿ ಕೂಗೇ ಇಲ್ಲ ಎಂದು ಕಾಂಗ್ರೆಸ್ ನಾಯಕರು ಸುಳ್ಳು ಹೇಳಿದರು. ಹಾಗಾದರೆ ನಿಮ್ಮ ಮೇಲೆ ಯಾಕೆ ಕೇಸ್ ಹಾಕಿಲ್ಲ ಎಂದು ಪ್ರಶ್ನಿಸಿದರು.