ಬೆಂಗಳೂರು: ಎರಡನೇ ಸುತ್ತಿನ ಯುಜಿ ನೀಟ್ (UG NEET) ಅಖಿಲ ಭಾರತ ಸೀಟು ಹಂಚಿಕೆ ಫಲಿತಾಂಶ ಇಂದು ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಎರಡನೇ ಸುತ್ತಿನ ಅಖಿಲ ಭಾರತ ಯುಜಿ ನೀಟ್ ಎಂಸಿಸಿ ಕೌನ್ಸಿಲಿಂಗ್ನಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳಿಗೆ, ಕೆಇಎನಿಂದ (KEA) ಹಂಚಿಕೆಯಾದ ಸೀಟಿಗೆ ಸೇರಲು ಅಥವಾ ಅಖಿಲ ಭಾರತ ಕೌನ್ಸಿಲಿಂಗ್ ಮೂಲಕ ಹಂಚಿಕೆಯಾದ ಸೀಟನ್ನು ಉಳಿಸಿಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಮಯವನ್ನು ನೀಡಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಕೆಇಎದಿಂದ ಹಂಚಿಕೆಯಾದ ಸೀಟನ್ನು ರದ್ದುಪಡಿಸಿಕೊಂಡು ಅಖಿಲ ಭಾರತ ಸೀಟು ಉಳಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳು, ಸೆ.20ರ ಬೆಳಿಗ್ಗೆ 11 ರೊಳಗೆ ಕೆಇಎದಿಂದ ಹಂಚಿಕೆಯಾದ ಯುಜಿನೀಟ್ ಸೀಟನ್ನು ಕೆಇಎ ಕಚೇರಿಗೆ ಖುದ್ದಾಗಿ ಬಂದು ರದ್ದು ಪಡಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಇಂತಹ ಅಭ್ಯರ್ಥಿಗಳಿಗೆ 10,000 ರೂ. ದಂಡ ವಿಧಿಸಿ, ಉಳಿದ ಮೊತ್ತವನ್ನು ಹಿಂದಿರುಗಿಸಲಾಗುವುದು. ಸೀಟು ರದ್ದು ಪಡಿಸಿಕೊಳ್ಳುವ ಸಮಯದಲ್ಲಿ ಅಖಿಲ ಭಾರತ ಕೌನ್ಸಿಲಿಂಗ್ ನಲ್ಲಿ ಹಂಚಿಕೆಯಾದ ಸೀಟುಗಳ ವಿವರವನ್ನು ಕೆಇಎ ಕಚೇರಿಗೆ ಖುದ್ದಾಗಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.