ಬಳ್ಳಾರಿ: ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿರುವ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅವರ ಸಹಚಚರರನ್ನು ಬಂಧಿಸಲಾಗಿದೆ. ಈಗಾಗಲೇ ಅವರು ಜೈಲು ಸೇರಿ ಮೂರು ತಿಂಗಳು ಆಗಿದೆ. ಇಂದಿಗೆ ದರ್ಶನ್ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳುವುದರಲ್ಲಿ ಇತ್ತು. ಹೀಗಾಗಿ, ದರ್ಶನ್ ಹಾಗೂ ಗ್ಯಾಂಗ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಎದುರು ಹಾಜರುಪಡಿಸಲಾಗಿದೆ. ಅವರ ನ್ಯಾಯಾಂಗ ಬಂಧನ ಅವಧಿ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಆಗಿದೆ.
ಇದರ ಬೆನ್ನಲ್ಲೇ ದರ್ಶನ್ ಅವರು ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ 21ದಿನ ಕಳೆದಿದ್ದು, ಇದೀಗ ನಾಲ್ಕನೇ ಬಾರಿ ಬಳ್ಳಾರಿ ಜೈಲಿನಲ್ಲಿ ಪತಿಯನ್ನು ವಿಜಯಲಕ್ಷ್ಮೀ ಭೇಟಿಯಾಗಿ, ಧೈರ್ಯ ತುಂಬುತ್ತಿದ್ದಾರೆ. ಇದುವರೆಗೆ ವಿಜಯಲಕ್ಷ್ಮೀ ಜತೆ ದರ್ಶನ್ ಸಹೋದರ ದಿನಕರ್ ತೂಗುದೀಪ್ ಅವರು ಬರುತ್ತಿದ್ದರು. ಇನ್ನು ಬಳ್ಳಾರಿ ಜೈಲಿನಲ್ಲಿ ದರ್ಶನ್ ರಕ್ತ ಸಂಬಂಧಿಗಳಿಗೆ ಮಾತ್ರ ಅವಕಾಶ ಎಂದು ಹೇಳಲಾಗಿತ್ತು. ಆದರೆ ಮೊದಲ ಬಾರಿ ದರ್ಶನ್ ಸ್ನೇಹಿತ ನಟ ಧನ್ವೀರ್, ಆಪ್ತ ಹೇಮಂತ್ ಅವರು ವಿಜಯಲಕ್ಷ್ಮೀ ಜತೆ ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ.