ಬೆಂಗಳೂರು:- ಬೀದಿನಾಯಿ ಕಡಿತ ಪ್ರಕರಣಗಳ ನಿರ್ವಹಣೆಗೆ ಬಿಬಿಎಂಪಿ ಹೆಲ್ಪ್ ಲೈನ್ ಬಿಡುಗಡೆ ಮಾಡಲಾಗಿದೆ.
ಜಾಲಹಳ್ಳಿಯಲ್ಲಿ ಬೀದಿನಾಯಿಗಳ ದಾಳಿಗೆ ವೃದ್ಧೆ ಸಾವನ್ನಪ್ಪಿದ ಬೆನ್ನಲ್ಲೆ ರಾಜ್ಯ ಬೀದಿನಾಯಿಗಳ ಬಗ್ಗೆ ಟಿವಿ9 ವಿಶೇಷ ಅಭಿಯಾನ ನಡೆಸಿತ್ತು. ರಾಜಧಾನಿಯ ಬೀದಿನಾಯಿಗಳ ಕಾಟದ ಬಗ್ಗೆ ನಿರಂತರ ವರದಿ ಮೂಲಕ ಜಾಗೃತಿ ಮೂಡಿಸಿದ್ರೂ ಅಲರ್ಟ್ ಆಗದ ಪಾಲಿಕೆ ಆಯುಕ್ತರಿಗೆ ಸ್ವತಃ ಬೀದಿನಾಯಿಗಳ ಅವತಾರದ ದರ್ಶನವಾಗಿದೆ.
ಸಹಕಾರನಗರದಲ್ಲಿ ರೌಂಡ್ಸ್ ವೇಳೆ ಪಾಲಿಕೆ ಆಯುಕ್ತರಿಗೆ ಬೌಬೌ ಗ್ಯಾಂಗ್ ಎದುರಾಗಿದ್ದು, ನಾಯಿಗಳ ಕಾಟಕ್ಕೆ ಶಾಕ್ ಆದ ಆಯುಕ್ತರು ರಸ್ತೆಯಿಂದ ವಾಪಸ್ ಆದ್ರೂ, ಈ ವೇಳೆ ಬೀದಿನಾಯಿಗಳ ಕಂಟ್ರೋಲ್ ಬಗ್ಗೆ ಮಾತಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸದ್ಯ ನಾಯಿಗಳನ್ನ ಬೇರೆಡೆ ಬಿಡಲು ಆಗುತ್ತಿಲ್ಲ. ಒಬಿಸಿ ಮೂಲಕ ಬರ್ತ್ ಕಂಟ್ರೋಲ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಬೀದಿನಾಯಿಗಳ ರೋಷಾವೇಷವನ್ನ ಕಣ್ಣಾರೆ ಕಂಡ ಪಾಲಿಕೆ ಮುಖ್ಯ ಆಯುಕ್ತರು, ಇದೀಗ ಬಿಬಿಎಂಪಿಯ ಪಶುಪಾಲನ ಇಲಾಖೆ ಮೂಲಕ ಬೀದಿನಾಯಿಗಳ ಕಡಿತ ಹಾಗೂ ರೇಬಿಸ್ಗೆ ಹೆಲ್ಪ್ ಲೈನ್ ನಂಬರ್ ಬಿಡುಗಡೆ ಮಾಡಿ ಪ್ರಕಟಣೆ ಹೊರಡಿಸಿದ್ದಾರೆ. 6364893322 ಹಾಗೂ 1533 ಸಹಾಯವಾಣಿ ಬಿಡುಗಡೆ ಮಾಡಿರೋ ಪಾಲಿಕೆ, ಇದರ ಜೊತೆಗೆ ಬಿಬಿಎಂಪಿ ವ್ಯಾಪ್ತಿಯ ಡಾಗ್ ಕೆನಲ್ ಹೆಚ್ಚಳಕ್ಕೂ ತಯಾರಿ ನಡೆಸಿದೆ. ಇನ್ನು ಸಂತಾನಹರಣ, ರೋಗ ನಿರೋಧಕ ಚುಚ್ಚುಮದ್ದು ನೀಡೋದನ್ನ ಕೂಡ ಹೆಚ್ಚಿಸಲು ಚಿಂತನೆ ನಡೆಸಿದ್ದು, ಟಿವಿ9 ವರದಿ ಬಳಿಕ ಪಾಲಿಕೆ ಅಲರ್ಟ್ ಆಗಿದೆ.
ಸದ್ಯ ಬೀದಿನಾಯಿಗಳಿಂದ ಆಗುತ್ತಿದ್ದ ಸಮಸ್ಯೆ ಬಗ್ಗೆ ಎಷ್ಟೇ ದೂರು ಬಂದರೂ ಸೈಲೆಂಟ್ ಆಗಿದ್ದ ಬಿಬಿಎಂಪಿ, ಇದೀಗ ಟಿವಿ9 ಅಭಿಯಾನದ ಬಳಿಕ ಆ ಬಗ್ಗೆ ಗಮನ ನೀಡುವುದಕ್ಕೆ ಸಜ್ಜಾಗಿದೆ. ಸದ್ಯ ಎಲ್ಲಾ ವಲಯಗಳ ಎಬಿಸಿ ಸೆಂಟರ್ ದುರಸ್ಥಿಗೂ ಚಿಂತನೆ ನಡೆಸಿರುವ ಪಾಲಿಕೆ 2023-24ರ ಬಜೆಟ್ನಲ್ಲಿ ಇದಕ್ಕಾಗಿ ಮೀಸಲಿಟ್ಟಿದ್ದ 1ಕೋಟಿ 77 ಲಕ್ಷದ 32 ಸಾವಿರ ರೂ. ಅನುದಾನ ಬಳಸಿಕೊಳ್ಳೋಕೆ ಸಜ್ಜಾಗಿದೆ.