ಹಾಸನ:- 100 ರೂಪಾಯಿಗಾಗಿ ದುರುಳರು ಸ್ನೇಹಿತನನ್ನೇ ಇರಿದು ಕೊಂದ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ಜರುಗಿದೆ.
27 ವರ್ಷದ ಗಣೇಶ್ ಕೊಲೆಯಾದ ದುರ್ದೈವಿ. ಕೇವಲ 100 ರೂಪಾಯಿ ಕೊಟ್ಟಿಲ್ಲವೆಂಬ ಕಾರಣಕ್ಕೆ ಮದ್ಯಪಾನದ ಅಮಲಿನಲ್ಲಿ ಸ್ನೇಹಿತರೇ ಆತನನ್ನು ಹತ್ಯೆ ಮಾಡಿರುವುದು ಗ್ರಾಮಸ್ಥರನ್ನು ದಂಗುಬಡಿಸಿದೆ.
ಗಣೇಶ್ ಗ್ರಾಮ ಪಂಚಾಯ್ತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಾ ಮನೆಗೆ ಆಸರೆಯಾಗಿದ್ದ. ಹೇಳಿ ಕೇಳಿ ಬೆಳಿಗ್ಗೆಯೇ ಕೊಳಾಯಿಗೆ ನೀರು ಬಿಡುವ ಕೆಲಸ ಮುಗಿಯುತ್ತಿದ್ದರಿಂದ ಸಂಜೆಯಾಗುತ್ತಲೇ ಸ್ನೇಹಿತರ ಜೊತೆ ಸೇರುವ ಅಭ್ಯಾಸ ಇರಿಸಿಕೊಂಡಿದ್ದ. ಶುಕ್ರವಾರ ಕೂಡ ಸಂಜೆ ಬೇಗನೆ ಕೆಲಸ ಮುಗಿಸಿ ಗೆಳೆಯರ ಜೊತೆ ಒಟ್ಟಿಗೆ ಪಾರ್ಟಿ ಮಾಡಿದ್ದ. ಪಾರ್ಟಿಯೆಲ್ಲ ಮಗಿದ ಬಳಿಕ ಗಣೇಶ್ನ ಗೆಳೆಯ ರಘು ನೂರು ರೂಪಾಯಿ ಹಣ ಕೇಳಿದ್ದ ಎನ್ನಲಾಗಿದೆ.
ಇದಕ್ಕೆ ಉತ್ತರಿಸಿದ್ದ ಗಣೇಶ್, ‘‘ಪದೇ ಪದೆ ಹಣ ಯಾಕೆ ಕೇಳುತ್ತೀಯಾ? ನನ್ ಹತ್ರ ದುಡ್ಡಿಲ್ಲ ಹೋಗು’’ ಎಂದು ಹೇಳಿದ್ದಕ್ಕೆ ಸಿಟ್ಟಾಗಿದ್ದ ರಘು ತನ್ನ ನಟೋರಿಯಸ್ ಗೆಳೆಯ ಮಧು ಎಂಬುವವನಿಗೆ ವಿಚಾರ ತಿಳಿಸಿದ್ದ. ಮೊದಲೇ ಕುಡಿದ ಅಮಲಿನಲ್ಲಿದ್ದ ಮಧು ಏಕಾಏಕಿ ಗಣೇಶ್ ಮೇಲೆ ಎಗರಿಬಿದ್ದಿದ್ದಾನೆ. ನನ್ನ ದೋಸ್ತನಿಗೆ ಹಣ ಕೊಡುವುದಿಲ್ಲ ಎನ್ನುತ್ತೀಯಾ ಎಂದು ಹಲ್ಲೆ ಮಾಡಲು ಮುಂದಾಗಿದ್ದಾನೆ. ಗಣೇಶ್ ತಪ್ಪಿಸಿಕೊಂಡು ಓಡಲು ಯತ್ನಿಸಿದರೂ ಬಿಡದೆ ಹಿಂಬಾಲಿಸಿ ಬಂದ ಪಾಪಿಗಳು ಇರಿದು ಕೊಂದು ಪರಾರಿಯಾಗಿದ್ದಾರೆ.