ಮೈಸೂರು: ಎಲ್ಲೆಡೆ ಗಣೇಶ ಹಬ್ಬವನ್ನು (Ganesh Chaturthi) ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಅರಮನೆ ನಗರ ಮೈಸೂರಿನಲ್ಲಿ (Mysuru) ದಸರಾ ಆನೆಗಳಿಗೂ (Dasara Elephant) ಪೂಜೆ ನೆರವೇರಿಸಲಾಯಿತು. ನಾಡಹಬ್ಬ ದಸರಾ ಮಹೋತ್ಸವಕ್ಕಾಗಿ ಮೈಸೂರಿಗೆ ಬಂದಿರುವ ಆನೆಗಳಿಗೆ ಅರಮನೆಯ ಆವರಣದಲ್ಲಿ ಪೂಜೆ ನೆರವೇರಿಸಲಾಯಿತು.
ಆನೆಗಳನ್ನು ಸಾಲಾಗಿ ನಿಲ್ಲಿಸಿ ಪೂಜೆ ನೆರವೇರಿಸಲಾಗಿದೆ. ಮಳೆಯ ನಡುವೆಯೇ ಗಣಪತಿಗೇ ಇಷ್ಟವಾದ ಮೋದಕ, ಬೆಲ್ಲ, ಕಬ್ಬು ಹೀಗೆ ಅನೇಕ ಭಕ್ಷ್ಯಗಳನ್ನು ನೈವೇದ್ಯವಾಗಿ ಅರ್ಪಿಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಸಿಸಿಎಫ್ ಮಾಲತಿ ಪ್ರಿಯಾ, ಡಿಸಿಎಫ್ ಡಾ.ಪ್ರಭುಗೌಡ ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಸುಗ್ರೀವ, ಮಹೇಂದ್ರ, ಗೋಪಿ, ಭೀಮ, ಲಕ್ಷ್ಮಿ, ವರಲಕ್ಷ್ಮಿ ಸೇರಿದಂತೆ ಎಲ್ಲ 14 ಆನೆಗಳೂ ಪಾಲ್ಗೊಂಡಿದ್ದವು.
ಗಣೇಶ ಹಬ್ಬದ ದಿನ ದಸರಾ ಆನೆಗಳಿಗೆ ಪೂಜೆ ಸಲ್ಲಿಸೋದು ವಾಡಿಕೆ. ಹಬ್ಬದ ದಿನ ಅಧಿಕಾರಿಗಳು ಕುಟುಂಬ ಸಮೇತರಾಗಿ ಪೂಜೆಯಲ್ಲಿ ಪಾಲ್ಗೊಂಡರು. ಆನೆಗಳಿಗೆ 21 ಬಗೆಯ ನೈವೇದ್ಯ ರೂಪದ ತಿನಿಸುಗಳನ್ನು ನೀಡಲಾಯಿತು.