ಬೆಂಗಳೂರು:- ಕಾಂಗ್ರೆಸ್ ಪಕ್ಷದ ಕನಸಿನ ಕೂಸು, ಬಯಲು ಸೀಮೆಯ ದಶಕದ ಕನಸು ಕೊನೆಗೂ ಈಡೇರಿದೆ. ಚಿಕ್ಕಬಳ್ಳಾಪುರದಲ್ಲಿ ಕುಡಿಯೊಡೆದ ಎತ್ತಿನಹೊಳೆ ಯೋಜನೆ ಹಾಸನದ ಹೆಬ್ಬನಹಳ್ಳಿಯಲ್ಲಿ ಜೀವಗಂಗೆಯಾಗಿ ಹರಿದು ಬರ್ತಿದ್ದಾಳೆ. ಪಶ್ಚಿಮಾಭಿಮುಖವಾಗಿ ಹರಿದು ಸಮುತ್ರ ಸೇರ್ತಿದ್ದ ನೀರನ್ನು ಪೂರ್ವಾಭಿಮುಖವಾಗಿ ತಿರುಗಿಸಿ 7 ಜಿಲ್ಲೆಗಳಿಗೆ ತರಲಾಗ್ತಿದೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಮೊದಲ ಹಂತದ ಯೋಜನೆಗೆ ಚಾಲನೆ ಕೊಟ್ಟು 2ನೇ ಹಂತವನ್ನು 2027ಕ್ಕೆ ಪೂರ್ಣಗೊಳಿಸುವ ಶಪಥ ಮಾಡಿದ್ರು.
ಮೆದುಳಿನ ಕ್ಯಾನ್ಸರ್ ಮೊಬೈಲ್ ಬಳಸೋದ್ರಿಂದ ಬರುತ್ತಾ!?, ಇಲ್ಲಿದೆ ಉತ್ತರ!
ಮಾಜಿ ಸಿಎಂ ವೀರಪ್ಪ ಮೋಯ್ಲಿ ಅವರಿಂದ ಕುಡಿಯೊಡೆದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಎತ್ತಿನಹೊಳೆ. ಬಯಲು ಸೀಮೆಯ 7 ಜಿಲ್ಲೆಗಳಾದ ಹಾಸನ, ತುಮಕೂರು, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಹಾಗು ರಾಮನಗರ ಜಿಲ್ಲೆಗಳ ದಶಕದ ಕನಸು ಕೊನೆಗೂ ನನಸಾಗಿ ಕಾರ್ಯರೂಪಕ್ಕೆ ಬಂದಿದೆ. 2014 ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ಯಾದ ಯೋಜನೆ ಹಾಸನದ ಹೆಬ್ಬನಹಳ್ಳಿಯಲ್ಲಿ ಅದೇ ಸಿಎಂ ಸಿದ್ದರಾಮಯ್ಯ ರಿಂದಲೇ ಲೋಕಾರ್ಪಣೆಗೊಂಡಿದೆ……..
ಹಾಸನ ಜಿಲ್ಲೆಯ ಘಟ್ಟಪ್ರದೇಶಗಳಲ್ಲಿ ಹರಿಯುವ ನೇತ್ರಾವತಿ ನದಿ ಮಳೆಗಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಿಯುತ್ತದೆ. ಸುಮಾರು 24.1 TMC ನೀರು ಪಶ್ಚಿಮಾಭಿಮುಖವಾಗಿ ಹರಿದು ಸಮುದ್ರದ ಪಾಲಾಗುತ್ತೆ. ಈ ಸಮುದ್ರದ ಪಾಲಾಗುತ್ತಿದ್ದ ನೀರನ್ನು ಪೂರ್ವಾಭಿಮುಖವಾಗಿ ತಿರುಗಿಸಿ 9 ಪಂಪ್ ಹೌಸ್ , 8 ಸಬ್ ಸ್ಟೇಷನ್ ಗಳ ಮೂಲಕ ಬರುವ ನೀರನ್ನು ದೊಡ್ಡನಾಗರದ ಬಳಿ ಸಂಗ್ರಹಿಸಿ ಪಂಪ್ ಮಾಡಿ ಹೆಬ್ಬನಹಳ್ಳಿಯ ನೀರು ವಿತರಣಾ ಕೇಂದ್ರದ ಮೂಲಕ
ಬಯಲು ಸೀಮೆಗೆ ಹರಿಸಲಾಗುತ್ತೆ. ಈ ಕಾರ್ಯಕ್ರಮವನ್ನು ಹೋಮಹನ ಪೂಜೆ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಆರಂಭಿಸಿದ್ರು. ದೊಡ್ಡನಾಗರದಲ್ಲಿ ನೀರು ಲಿಫ್ಟ್ ಮಾಡುವ ಮೆಷಿನ್ ಬಟನ್ ಒತ್ತುವ ಮೂಲಕ ಯೋಜನೆಗೆ ಚಾಲನೆ ಕೊಡಲಾಯ್ತು. ಅದಾದ್ಮೇಲೆ ಹೆಬ್ಬನಹಳ್ಳಿ ನೀರು ವಿತರಣಾ ಕೇಂದ್ರಕ್ಕೆ ಆಗಮಿಸಿ 4 ನೀರು ವಿತರಣಾ ಪೈಪ್ ಲೈನ್ ಗಳಲ್ಲಿ ಬೋರ್ಗರೆದು ಉಕ್ಕುತ್ತಿರುವ ಗಂಗೆ ಬಾಗಿನ ಅರ್ಪಿಸಿ ಜೀವಜಲವನ್ನು ಬರಮಾಡಿಕೊಂಡ್ರು ಸಿಎಂ, ಡಿಸಿಎಂ….
ಎತ್ತಿನಹೊಳೆ ಯೋಜನೆಯ ವಿಶೇಷತೆ – ಪ್ರಯೋಜನ ಏನು ಅಂತ ನೋಡೋದಾದ್ರೆ
* ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ನೀರು ಶೇಖರಿಸಿ ಅದನ್ನ ಪಂಪ್ ಮಾಡೋದು
* 24.01 TMC ನೀರನ್ನ 7 ಜಿಲ್ಲೆಗಳಿಗೆ ಪೂರೈಕೆ ಮಾಡೋದು
* ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿಗೆ ಪೂರೈಕೆ
* 7 ಜಿಲ್ಲೆಗಳ 29 ತಾಲ್ಲೂಕಿನ 38 ಪಟ್ಟಣ ಪ್ರದೇಶದ 6657 ಗ್ರಾಮದ 75.59 ಲಕ್ಷ ಜನರಿಗೆ ನೀರು ಪೂರೈಕೆ
* 24 ಟಿಎಂಸಿ ನೀರಿನ ಪೈಕಿ 14.056 ಟಿ.ಎಂ.ಸಿ ಕುಡಿಯುವ ನೀರು ಹಾಗೂ 9.953 ಟಿಎಂಸಿ ನೀರನ್ನ 527 ಕೆರೆಗೆ ತುಂಬಿಸಲಾಗುತ್ತದೆ
* ಈ ಯೋಜನೆಗೆ 23,251.66 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ.
* 4 ವಿಭಾಗಗಳಲ್ಲಿ ಯೋಜನೆ ನೀರು ಎತ್ತುವ ತೊಟ್ಟಿಗಳು,ಗುರುತ್ವ ಕಾಲುವೆ, ಸಮತೋಲನ ಜಲಾಶಯ, ಪೈಫ್ ಲೈನ್ ಗಳು
* 8 ವಿಯರ್ ಗಳ ಮೂಲಕ ಹರಿಯುವ ನೀರು ಸಕಲೇಶಪುರ ತಾಲೂಕಿನ ವಿವಿಧ ಭಾಗಗಳಲ್ಲಿ 8 ಪೈಪ್ ಲೈನ್ ಗಳ ನಿರ್ಮಾಣ
* ಪೈಪ್ ಲೈನ್ ಮೂಲಕ ಹರಿಯುವ ನೀರು ಸಕಲೇಶಪುರ ಡೊಡ್ಡನಾಗರದಲ್ಲಿ ವಿತರಣಾ ತೊಟ್ಟಿಗೆ ಬರಲಿದೆ.
* ದೊಡ್ಡ ನಾಗರ ವಿತರಣೆ ತೊಟ್ಟಿಗೆ ಬಂದ ನೀರನ್ನ 750 ಫೀಟ್ ಲಿಫ್ಟ್ ಮಾಡಿ ಹರಿಯಲು ಅನುಕೂಲ ಮಾಡಲಾಗುತ್ತದೆ
* ಇಲ್ಲಿಂದ ಹರಿದ ನೀರು ಸಕಲೇಶಪುರದ ಹೆಬ್ಬನಹಳ್ಳಿ ತಲುಪಲಿದೆ
* ಹೆಬ್ಬನಹಳ್ಳಿಯಿಂದ 252.61 ಕಿಲೋಮೀಟರ್ ಗುರುತ್ವ ಕಾಲುವೆ ಮೂಲಕ ಬರಪೀಡಿತ ಪ್ರದೇಶಗಳಿಗೆ ಹೋಗಲಿದೆ
* ಒಟ್ಟು 252.61 ಉದ್ದದ ಗುರುತ್ವ ಕಾಲುವೆ ಮೊದಲ ಹಂತದ ಭಾಗವಾಗಿ 164.47 ಪೂರ್ಣಗೊಂಡಿದೆ..
* 25.87. ಕಿಲೋಮೀಟರ್ ಪ್ರಗತಿಯಲ್ಲಿದೆ
* ಐದಳ್ಳ ಕಾವಲು ಬಳಿ 5 ಕಿಲೋಮೀಟರ್ ಅರಣ್ಯ ಭೂಮಿಯಲ್ಲಿ ಕಾಲುವೆ ಹೋಗಬೇಕಿದೆ
* ಅಲ್ಲಿ ಅರಣ್ಯ ಇಲಾಖೆ ಸಮಸ್ಯೆಯಿಂದ ಕಾಮಗಾರಿ ಆಗದೇ 32ನೇ ಕಿ.ಮೀನಲ್ಲಿ ನೀರನ್ನ ಬೇರೆಡೆ ತಿರುಗಿಸಲು ಪ್ಲ್ಯಾನ್
* ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರಕ್ಕೆ 1,500 ಕ್ಯೂಸೆಕ್ ನೀರು ಹರಿಸಲಾಗುತ್ತೆ.
ಹೆಬ್ಬನಹಳ್ಳಿ ಬಳಿ ಬಾಗಿನ ಅರ್ಪಿಸಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಗಂಗಾ ಮಾತೆ ಗುಡ್ಡ ಬೆಟ್ಟ ಇಳಿದು ಬಯಲು ಸೀಮೆ ಕಡೆ ಹರಿಯುತ್ತಿದ್ದಾಳೆ. ಗಂಗೆ- ಗೌರಿಯನ್ನು ಒಂದು ಮಾಡಿದ್ದೇವೆ ಭಗೀರಥ ಗಂಗೆಯನ್ನ ಭೂಮಿಗೆ ತಂದಂತೆ ನಮ್ಮ ಸರ್ಕಾರ ಗಂಗೆಯನ್ನು ತಂದಿದೆ,
10 ವರ್ಷಗಳ ಪರಿಶ್ರಮದ ನಂತರ ಭಗೀರಥ ಸಾಧನೆ ಮಾಡಿ ನುಡಿದಂತೆ ನಡೆದಿದ್ದೇವೆ. ಟೀಕೆಗಳು ಸಾಯುತ್ತವೆ, ಸಾಧನೆ ಉಳಿಯುತ್ತವೆ ನಮ್ಮ ಗುರಿ, ಛಲ, ಸಾಧನೆಯನ್ನು ಮಾಡಿದ್ದೇವೆ. ನಾನು ಯಾರ ಬಗ್ಗೆನು ದೂಷಣೆ ಮಾಡಲ್ಲ,
ಛಲ ಇರಬೇಕು, ಅವಕಾಶಗಳನ್ನು ಸೃಷ್ಟಿ ಮಾಡ್ಕೊಂಡು ಮುಂದೆ ಹೋಗಬೇಕು. ಯಾರಿಗು ಆತಂಕ ಬೇಡ 2027 ಕ್ಕೆ ಎಲ್ಲಾ 7 ಜಿಲ್ಲೆಗಳಿಗು ನೀರು ಒಪ್ಪಿಸುವ ಕೆಲಸ ಮಾಡ್ತೀನಿ ಇದು ನನ್ನ ಶಪಥ. ನೀರು ಬರಲ್ಲ ಬಂದ್ರೆ ತಲೆ ಬೋಡಿಸಿಕೊಳ್ತೀನಿ ಅಂದ್ರು , ನೀರು ಬಂದಿದೆ ಯಾರು ತಲೆ ಬೋಡಿಸಿಕೊಳ್ಳೋದು ಬೇಡ ಎಲ್ಲರಿಗೂ ಅಸೆಂಬ್ಲಿಯಲ್ಲಿ ಉತ್ತರ ಕೊಡ್ತೀವಿ. ಕುದಿಯೋರು ಕುದಿತಿದ್ದಾರೆ, ಉರಿಯೋರು ಉರಿತಿದ್ದಾರೆ, ನಮ್ಮ ಕೆಲಸ ನಾವು ಮಾಡ್ತೀವಿ. ವಜ್ರವನ್ನು ವಜ್ರದಿಂದಲೇ ಕತ್ತರಿಸಬೇಕು , ಅದನ್ನು ನಾವು ಮಾಡಿದ್ದೀವಿ ಅಂತ ಅಬ್ಬರಿಸಿದ್ರು ಡಿಸಿಎಂ ಡಿಕೆಶಿ….
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈ ಯೋಜನೆ 2 ಹಂತಗಳಲ್ಲಿ ಕಾರ್ಯಗತ ವಾಗುತ್ತೆ. ಮೊದಲ ಹಂತ ಆಗಿದೆ, 2ನೇ ಹಂತ 2027ಕ್ಕೆ ಮುಗಿಯುತ್ತೆ, ನಾನೇ ಭೂಮಿ ಪೂಜೆ ಮಾಡಿ ನಾನೇ ಉದ್ಘಾಟನೆ ಮಾಡಿದ್ದೇನೆ. ಈ ಯೋಜನೆ ಬಿಜೆಪಿ ಸರ್ಕಾರ ರೂಪಿಸಿತ್ತು ಆದ್ರೆ ಹಣ ಕೊಟ್ಟಿದ್ದು ನಾವು ಟೆಂಡರ್ ಕೊಟ್ಟಿದ್ದು ನಾವು, ಕಾರ್ಯರೂಪಕ್ಕೆ ತಂದಿದ್ದು ನಾವು. ಕುಡಿಯುವ ನೀರು ಕೊಡ್ತೀವಿ, 527 ಕೆರೆಗಳನ್ನು ತುಂಬುಸ್ತೀವಿ ಬಿಜೆಪಿ- ಜೆಡಿಎಸ್ ನವರು ಟೀಕೆ ಮಾಡ್ತಾನೆ ಇರ್ಲಿ. ಇನ್ನು 7-8 ಟಿಎಂಸಿ ನೀರು ಹೆಚ್ಚುವರಿ ಸಿಗುತ್ತೆ
ಫಾರೆಸ್ಟ್ ನವರ ಜೊತೆ ಒಂದು ಮೀಟಿಂಗ್ ಮಾಡೋಣ,
ಕುಡಿಯುವ ನೀರಿನ ಪ್ರಾಜೆಕ್ಟ್ ಇದು, ಯಾವುದೇ ತೊಂದರೆ ಕೊಡಬಾರದು ಎಲ್ಲವನ್ನು ಬಗೆಹರಿಸೋಣ ಎಂದು ಬರವಸೆ ನೀಡಿದ್ರು ಸಿಎಂ ಸಿದ್ದರಾಮಯ್ಯ..
ಒಟ್ನಲ್ಲಿ ಕಾಂಗ್ರೆಸ್ ಸರ್ಕಾರ ತಾನು ಕೊಟ್ಟ ಮಾತನ್ನು ಉಳಿಸಿಕೊಂಡಿದೆ ಬಯಲು ಸೀಮೆ ಜನರ ದಶಕದ ಕನಸನ್ನು ಸಾಕಾರಗೊಳಿಸಿದೆ. ಸಮುದ್ರ ಸೇರ್ತಿದ್ದ ನೀರು ಕುಡಿಯಲು ಹಾಗೂ ಕೆರೆಗಳನ್ನು ತುಂಬಿಸಲು ಬಳಕೆಯಾಗಲಿದೆ, 2ನೇ ಹಂತ 2027ಕ್ಕೆ ಮುಗಿಸುವ ಬರವಸೆಯನ್ನು ಸಿಎಂ, ಡಿಸಿಎಂ ಕೊಟ್ಟಿದ್ದು. ವಿಪಕ್ಷಗಳ ಆರೋಪಗಳಿಗೆ ಕೆಲಸದ ಮೂಲಕ ಠಕ್ಕರ್ ಕೊಟ್ಟಿದ್ದಾರೆ.