ಮತ್ತೊಂದು ಅಧಿಕಾರಯುತ ಪ್ರದರ್ಶನ ನೀಡಿದ ಕರುಣ್ ನಾಯರ್ ಸಾರಥ್ಯದ ಮೈಸೂರು ವಾರಿಯರ್ಸ್ ತಂಡ ಫೈನಲ್ ಪಂದ್ಯದಲ್ಲಿ 45 ರನ್ಗಳಿಂದ ಮಯಾಂಕ್ ಅಗರ್ವಾಲ್ ಸಾರಥ್ಯದ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಬಗ್ಗುಬಡಿಯುವ ಮೂಲಕ 2024ರ ಸಾಲಿನ ಕೆಎಸ್ಸಿಎ ಟಿ20 ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ ತಂಡ ತನ್ನ ಪಾಲಿನ 20 ಓವರ್ಗಳಲ್ಲಿ 4 ವಿಕೆಟ್ಗೆ 207 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಟೂರ್ನಿಯಲ್ಲಿ ಶ್ರೇಷ್ಠ ಲಯ ಪ್ರದರ್ಶಿಸಿದ ಸ್ಟಾರ್ ಬ್ಯಾಟರ್ ಹಾಗೂ ಮೈಸೂರು ವಾರಿಯರ್ಸ್ ಕ್ಯಾಪ್ಟನ್ ಕರುಣ್ ನಾಯರ್, ಫೈನಲ್ನಲ್ಲಿ ಬಿರುಸಿನ 66 ರನ್ ಬಾರಿಸಿದರು. ಆರಂಭಿಕ ಬ್ಯಾಟರ್ ಕಾರ್ತಿಕ್ ಎಸ್ಯು 71 ರನ್ಗಳ ಕೊಡುಗೆ ಕೊಟ್ಟರು. ಸ್ಲಾಗ್ ಓವರ್ಗಳಲ್ಲಿ ಸಿಡಿದೆದ್ದ ಆಲ್ರೌಂಡರ್ ಮನೋಜ್ ಭಾಂಡಗೆ ಕೇವಲ 13 ಎಸೆತಗಳಲ್ಲಿ ಅಜೇಯ 44 ರನ್ ಸಿಡಿಸಿ ತಂಡದ ಮೊತ್ತವನ್ನು 200 ರನ್ಗಳ ಗಡಿ ದಾಟಿಸಿದರು.