ಭಾರತದ ದಂತಕಥೆ ಹಾಗೂ ಸಾರ್ವಕಾಲಿಕ ಶ್ರೇಷ್ಠ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರ ಕೊಡುಗೆಯನ್ನು ಗುರುತಿಸಲು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ. ಧ್ಯಾನ್ ಚಂದ್ ಅವರು ಹಲವು ಪೀಳಿಗೆಯವರಿಗೆ ಪ್ರೇರಣೆಯಾಗಿದ್ದವರು. ಕ್ರೀಡಾಲೋಕದಲ್ಲಿ ಭಾರತದ ಹಾಕಿ ತಂಡ ಆಧಿಪತ್ಯ ಮೆರೆಯುವಂತೆ ಮಾಡಿದ್ದವರು. ಹೀಗಾಗಿ ರಾಷ್ಟ್ರೀಯ ಕ್ರೀಡಾ ದಿನವು ಕೇವಲ ಆಚರಣೆಯಷ್ಟೇ ಅಲ್ಲ, ಕ್ರೀಡೆಗಳು ನಮ್ಮ ಜೀವನವನ್ನು ಹೇಗೆ ಸಮೃದ್ಧಗೊಳಿಸುತ್ತವೆ ಮತ್ತು ನಮ್ಮನ್ನು ಒಂದು ಸಮುದಾಯವಾಗಿ ಹೇಗೆ ಒಗ್ಗೂಡಿಸುತ್ತವೆ
ಭಾರತ ಸರ್ಕಾರ 2012ರಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲು ಘೋಷಿಸಿತು. ಆಗಸ್ಟ್ 29 ರಂದು ಕ್ರೀಡಾ ಪ್ರತಿಭೆಯನ್ನು ಗುರುತಿಸುವ ದಿನವೆಂದು ಘೋಷಣೆ ಮಾಡಲಾಯಿತು. ‘ಹಾಕಿಯ ಮಾಂತ್ರಿಕ’ ಎಂದೇ ಕರೆಯಲ್ಪಡುವ ಮೇಜರ್ ಧ್ಯಾನ್ ಚಂದ್ ಅವರನ್ನು ಗೌರವಿಸಲು ಅವರು ಜನಿಸಿದ ಈ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮೇಜರ್ ಧ್ಯಾನ್ ಚಂದ್ ಅವರು 1905 ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಜನಿಸಿದವರು. 1926 ರಿಂದ 1948 ರವರೆಗೆ ಭಾರತ ತಂಡದ ಪರ 185 ಪಂದ್ಯಗಳಲ್ಲಿ ಭಾಗವಹಿಸಿ 400ಕ್ಕೂ ಹೆಚ್ಚು ಗೋಲ್ ಬಾರಿಸಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನವು ಭಾರತದ ಹಾಕಿಗೆ ಚಿನ್ನದ ಯುಗವನ್ನು ತಂದಿತು. 1928, 1932 ಮತ್ತು 1936 ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಧ್ಯಾನ್ ಚಂದ್ ಚಿನ್ನದ ಪದಕಗಳನ್ನು ಗೆದ್ದುಕೊಟ್ಟಿದ್ದಾರೆ.
ರಾಷ್ಟ್ರೀಯ ಕ್ರೀಡಾ ದಿನವನ್ನು ಭಾರತದ ಯುವಜನರಲ್ಲಿ ಕ್ರೀಡಾಸಕ್ತಿ ಹೆಚ್ಚಿಸಲು ಸ್ಥಾಪಿಸಲಾಯಿತು. ಈ ದಿನ, ಆಗಸ್ಟ್ 29, ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನವನ್ನು ನೆನಪಿಸುತ್ತಾ ಅವರು ಹಾಕಿ ಕ್ರೀಡೆಗೆ ನೀಡಿದ ಕೊಡುಗೆಗಳನ್ನು ಸ್ಮರಿಸುವ ನಿಟ್ಟಿನಲ್ಲಿ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದೆ. ಧ್ಯಾನ್ ಚಂದ್ ಅವರು ಕ್ರೀಡೆಯಲ್ಲಿ ಪಡೆದ ಅಪಾರ ಕೌಶಲ್ಯ ಮತ್ತು ಸಾಧನೆಗಳಿಗೆ ಚಿರಸ್ಮರಣೀಯ.
ಈ ವಿಶೇಷ ದಿನದಂದು, ದೇಶಾದ್ಯಾಂತ ಹಲವು ಕ್ರೀಡಾ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಕ್ರೀಡಾಪಟುಗಳು, ತಂಡಗಳು ಮತ್ತು ವ್ಯಕ್ತಿಗಳನ್ನು ಗೌರವಿಸಲಾಗುತ್ತದೆ. ಕ್ರೀಡಾ ಮತ್ತು ದೈನಂದಿನ ಜೀವನದಲ್ಲಿ ಶಾರೀರಿಕ ಆರೋಗ್ಯದ ಪ್ರಾಮುಖ್ಯತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ದಿನವು ಉದ್ದೇಶಗಳಲ್ಲಿ ಒಂದು.
ಆಗಸ್ಟ್ 29 ರಂದು ಜನಿಸಿದ ಧ್ಯಾನ್ ಚಂದ್, ಹಾಕಿ ಕ್ರೀಡೆಯ ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠ ಆಟಗಾರರಾಗಿ ಹೆಸರು ಮಾಡಿದವರು. 1928, 1932 ಮತ್ತು 1936ರ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಧ್ಯಾನ್ ಚಂದ್ ಸಾರಥ್ಯದ ಭಾರತ ತಂಡ ಚಿನ್ನದ ಪದಕಗಳನ್ನು ಗೆದ್ದು ಕೀರ್ತಿ ತಂದಿತ್ತು. ಅಮೋಘ ತಂತ್ರಗಾರಿಕೆಯನ್ನು ಮೈಗೂಡಿಸಿಕೊಂಡಿದ್ದ ಧ್ಯಾನ್ ಚಂದ್ ಹಾಕಿ ಲೋಕದಲ್ಲಿ ‘ಮಾಂತ್ರಿಕ’ (ಮ್ಯಾಜಿಷಿಯನ್) ಎಂಬ ಬಿರುದನ್ನು ಪಡೆದರು. ಅವರ ಹುಟ್ಟು ಹೆಸರು ಧ್ಯಾನ್ ಸಿಂಗ್. ಆದರೆ, ಬೆಳಗ್ಗಿನ ಸಮಯದಲ್ಲಿ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಿ, ರಾತ್ರಿ ವೇಳೆ ಚಂದ್ರನ ಬೆಳಕಿನಡಿ ಹಾಕಿ ಅಭ್ಯಾಸ ಮಾಡಿ ಸಾಧನೆಯ ಶಿಖರ ಏರಿದವರು. ಚಂದಿರನ ಬೆಳಕಿನಲ್ಲಿ ಅಭ್ಯಾಸ ಮಾಡಿ ಸಾಧನೆಗೈದ ಅಪ್ರತಿಮ ಸಾಧಕನನ್ನು ಬಳಿಕ ಧ್ಯಾನ್ ಚಂದ್ ಎಂದೇ ಕರೆಯಲಾಯಿತು.
ಧ್ಯಾನ್ ಚಂದ್, ತಮ್ಮ ಹಾಕಿ ವೃತ್ತಿಬದುಕಿನಲ್ಲಿ ಭಾರತ ತಂಡದ ಪರ ಒಟ್ಟು 185 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 400ಕ್ಕೂ ಹೆಚ್ಚು ಗೋಲ್ಗಳು ಅವರ ಸ್ಟಿಕ್ನಿಂದ ಮೂಡಿಬಂದಿದೆ. ಹೀಗಾಗಿ ಅವರ ಪರಂಪರೆ ಹಾಕಿ ಆಟದಲ್ಲಿ ಹಲವು ಪೀಳಿಗೆಯನ್ನು ಪ್ರೇರೇಪಿಸಿದೆ. ಅವರಿಗೆ ಗೌರವವನ್ನು ನೀಡಲು, ಭಾರತ ಸರ್ಕಾರವು 2021 ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯೆಂದು ಮರುನಾಮಕರಣ ಮಾಡಿತ್ತು.