ಬೆಂಗಳೂರು:- ಜೈಲಿನಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಬಿಗಿಭದ್ರತೆಯೊಂದಿಗೆ ದರ್ಶನ್ ಅವರನ್ನು ಪೊಲೀಸರು ಬಳ್ಳಾರಿಯತ್ತ ಕರೆದೊಯ್ಯುತ್ತಿದ್ದಾರೆ. ಬೆಳಗ್ಗೆ 4.30 ಸುಮಾರಿಗೆ ಸ್ಥಳಾಂತರ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.
ನಟ ದರ್ಶನ್ ಅವರು, ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವರ ಹತ್ಯೆ ಕೇಸ್ ನಲ್ಲಿ ಜೂನ್ ತಿಂಗಳಲ್ಲಿ ಬಂಧನಕ್ಕೊಳಗಾಗಿದ್ದರು. ಅವರ ಜೊತೆಗೆ ಕೊಲೆಗೆ ಸಹಕರಿಸಿದ ಆರೋಪದಡಿ ದರ್ಶನ್ ಸೇರಿ ಒಟ್ಟು 17 ಆರೋಪಿಗಳ ಬಂಧನವಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಅವರು ಮೊದಲು ಪೊಲೀಸ್ ಬಂಧನದಲ್ಲಿದ್ದರು. ಆನಂತರ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ವಿಚಾರ ಹೊರಬಿದ್ದ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆಯ ಮೇರೆಗೆ, ಬೆಂಗಳೂರಿನ ನ್ಯಾಯಾಲಯದಿಂದ ಅನುಮತಿ ಪಡೆದು ಜೈಲಿನಲ್ಲಿರುವ ದರ್ಶನ್ ಹಾಗೂ ಅವರ ಸ್ನೇಹಿತರ ತಂಡವನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಎಸಿಪಿ ಭರತ್ ರೆಡ್ಡಿಯವರ ನೇತೃತ್ವದಲ್ಲಿ ದರ್ಶನ್ ಅವರನ್ನು ಸ್ಥಳಾಂತರಿಸಲಾಗುತ್ತಿದೆ.
ದರ್ಶನ್ ಅವರನ್ನು ಸ್ಥಳಾಂತರಿಸುವಾಗ, ಬೆಂಗಳೂರು – ತುಮಕೂರು – ಚಳ್ಳಕೆರೆ ಮಾರ್ಗವಾಗಿ ಸಾಗಿ, ಆನಂತರ ಮೊಳಕಾಲ್ಮುರು – ರಾಂಪುರದ ಮೂಲಕ ಬಳ್ಳಾರಿಗೆ ಹೋಗಲು ಪೊಲೀಸರು ಮೊದಲು ನಿರ್ಧರಿಸಿದ್ದರು. ಆದರೆ, ಮಾರ್ಗ ಮಧ್ಯೆ ದರ್ಶನ್ ಅವರ ಅಭಿಮಾನಿಗಳಿಂದ ಅವರ ನೋಡಲು ನೂಕುನುಗ್ಗಲು ಉಂಟಾಗಬಹುದು, ಆ ಸಂದರ್ಭದಲ್ಲಿ ಭದ್ರತೆಗೆ ಅಡಚಣೆಯಾಗಬಹುದು ಎಂದು ಊಹಿಸಿ, ಮಾರ್ಗವನ್ನು ಬದಲಿಸಲು ನಿರ್ಧರಿಸಲಾಗಿತ್ತು.
ಯಾವ್ಯಾವ ಜೈಲಿಗೆ ಯಾರು?
1. ಬಳ್ಳಾರಿ ಜೈಲಿಗೆ ದರ್ಶನ್
2.ಮೈಸೂರು ಜೈಲಿಗೆ ಪವನ್ , ರಾಘವೇಂದ್ರ, ನಂದೀಶ್
3. ಶಿವಮೊಗ್ಗ ಜೈಲಿಗೆ ಜಗದೀಶ್ , ಲಕ್ಷ್ಮಣ್
4. ಧಾರವಾಡ ಜೈಲಿಗೆ ಧನರಾಜ್
5. ವಿಜಯಪುರ ಜೈಲಿಗೆ ವಿನಯ್
6. ಕಲಬುರುಗಿ ಜೈಲಿಗೆ ನಾಗರಾಜ್
7. ಬೆಳಗಾವಿ ಜೈಲಿಗೆ ಪ್ರದೂಶ್