ನಾಯಕ, ವಿಕೆಟ್ ಕೀಪರ್ ಕೆ.ಎಲ್ ರಾಹುಲ್ ಅವರನ್ನು ಲಕ್ನೋ ತಂಡದಲ್ಲಿಯೇ ಉಳಿಸಿಕೊಳ್ಳಲು ತಂಡದ ಮಾಲೀಕ ಸಂಜಯ್ ಗೋಯಂಕ್ ಮಾತುಕತೆ ನಡೆಸಿದ್ದಾರೆ.
ಅಲಿಪುರ್ನ ತಮ್ಮ ಕಚೇರಿಯಲ್ಲಿ ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದ ಅವರು ರಾಹುಲ್ ಅವರನ್ನು ಲಕ್ನೋ ತಂಡದಲ್ಲಿಯೇ ಮುಂದುವರೆಯುವಂತೆ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಬಾರಿಯ ಐಪಿಎಲ್ನಲ್ಲಿ ಹೈದರಾಬಾದ್ ಮತ್ತು ಲಕ್ನೋ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡವು 10 ವಿಕೆಟ್ನಿಂದ ಹಿನಾಯವಾಗಿ ಸೋತಿತ್ತು. ಇದರಿಂದ ಸಿಟ್ಟಿಗೆದ್ದ ಲಕ್ನೋ ತಂಡದ ಮಾಲಿಕ ಗೋಯೆಂಕಾ ಡಗೌಟ್ಗೆ ಬಂದು ಸಾರ್ವಜನಿಕವಾಗಿಯೇ ನಾಯಕ ಕೆ.ಎಲ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತುಂಬಾ ಚರ್ಚೆಗೆ ಕಾರಣವಾಗಿತ್ತು. ಮಾಲೀಕರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು, ಎಲ್ಲರ ಮುಂದೆಯೇ ಅವರು ಹೀಗೆ ಮಾಡಬಾರದಾಗಿತ್ತು. ರಾಹುಲ್ಗೆ ಲಕ್ನೋ ತಂಡದಲ್ಲಿ ಅವಮಾನವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಲಕ್ನೋ ತಂಡದ ಮಾಲೀಕ ಸಂಜಯ್ ಗೋಯೆಂಕ್ ಅವರು ಕೆ.ಎಲ್ ರಾಹುಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಅವರನ್ನು ಲಕ್ನೋ ತಂಡದಲ್ಲಿಯೇ ಮುಂದುವರೆಯಲು ಕೇಳಿಕೊಂಡಿದ್ದು ಚರ್ಚೆಯಾಗುತ್ತಿದೆ.
ಈ ಹಿಂದೆಯ ಸಂದರ್ಶನವೊಂದರಲ್ಲಿ ಕೆಎಲ್ ರಾಹುಲ್ ಆರ್ಸಿಬಿ (RCB) ತಂಡದ ಪರವಾಗಿ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಕನ್ನಡಿಗರು ಮತ್ತು ಕ್ರಿಕೆಟ್ ಅಭಿಮಾನಿಗಳು ರಾಹುಲ್ ಅವರಿಗೆ ಲಕ್ನೋ ತಂಡದಲ್ಲಿ ಅವಮಾನವಾಗುತ್ತಿದೆ. ಹಾಗಾಗಿ ಅವರು ಆರ್ಸಿಬಿ ಪರವಾಗಿ ಆಟವಾಡಬೇಕು ಎಂದು ಕೋರಿಕೊಂಡಿದ್ದರು. ಆರ್ಸಿಬಿ ಫ್ರಾಂಚೈಸಿ ಕೂಡ ರಾಹುಲ್ ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇಲ್ಲಿಯವರೆಗೆ ರಾಹುಲ್ ಯಾವುದೇ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ. ಹೀಗಾಗಿ ರಾಹುಲ್ರ ಮುಂದಿನ ನಡೆ ಕುತೂಹಲ ಮೂಡಿಸಿದೆ.