ನವದೆಹಲಿ: ರೈತರ ಪ್ರತಿಭಟನೆ ಕುರಿತ ನಟಿ-ಸಂಸದೆ ಕಂಗನಾ ರಣಾವತ್ ಅವರಿಗೆ ಬಿಜೆಪಿ ಛೀಮಾರಿ ಹಾಕಿದೆ. ಅಲ್ಲದೇ ಕಂಗನಾ ಅವರ ಹೇಳಿಕೆ, ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ ಅಭಿಪ್ರಾಯವಲ್ಲ ಎಂದು ಬಿಜೆಪಿ ಸ್ಪಷ್ಟೀಕರಣ ನೀಡಿದೆ. ಹೌದು. ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್ ರೈತರ ಚಳುವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ರೈತ ಹೋರಾಟ ನಿಗ್ರಹಿಸುವ ಸಂಬಂಧ ಕಠಿಣ ನಿಲುವುಗಳನ್ನು ಕೈಗೊಂಡಿತು. ನಾಯಕರು ಬಲವಾಗಿರದಿದ್ದರೆ ಅಥವಾ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಮ್ಮ ದೇಶದಲ್ಲೂ ಬಾಂಗ್ಲಾದೇಶದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದಕ್ಕೆ ಸ್ಪಷ್ಟೀಕರಣ ನೀಡಿರುವ ಬಿಜೆಪಿ, ಅದು ಪಕ್ಷದ ಅಭಿಪ್ರಾಯವಲ್ಲ, ಕಂಗನಾ ಅವರ ವೈಯಕ್ತಿಕ ಹೇಳಿಕೆಯಾಗಿದೆ. ಪಕ್ಷದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅಧಿಕಾರ ಅವರಿಗಿಲ್ಲ ಹಾಗೂ ನಾವು ಯಾವುದೇ ರೀತಿಯ ಅನುಮತಿಯೂ ನೀಡಿಲ್ಲ ಎಂದಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡದಂತೆ ಕಂಗನಾ ಅವರಿಗೆ ಎಚ್ಚರಿಕೆ ನೀಡಿದೆ.
Chanakya Niti: ಜೀವನದ ಹೋರಾಟದಲ್ಲಿ ನಾವು ಮೋಸ ಹೋಗಬಾರದು ಎಂದ್ರೆ ಚಾಣಕ್ಯನ ಈ ನೀತಿ ನೆನಪಿರಲಿ!
ಇದಕ್ಕೂ ಮುನ್ನ ಕಂಗನಾಗೆ ಪ್ರಚೋದನಕಾರಿ ಹೇಳಿಕೆ ನೀಡದಂತೆ ಪಂಜಾಬ್, ಹರಿಯಾಣದ ಬಿಜೆಪಿ ನಾಯಕರು ಸಲಹೆ ನೀಡಿದ್ದರು. ರೈತರ ಬಗ್ಗೆ ಮಾತನಾಡುವುದು ಕಂಗನಾ ಅವರ ವ್ಯಾಪ್ತಿಗೆ ಬರಲ್ಲ. ಬಿಜೆಪಿ ಹಾಗೂ ಮೋದಿ ಸರ್ಕಾರ ಯಾವತ್ತಿಗೂ ರೈತರ ಪರವಾಗಿದೆ ಎಂದು ಪಂಜಾಬ್ ಬಿಜೆಪಿ ನಾಯಕ ಹರ್ಜಿತ್ ಗ್ರೆವಾಲ್ ಹೇಳಿದ್ದರು.
ಸಹಜವಾಗಿಯೇ ಕಂಗನಾ ಹೇಳಿಕೆಗೆ ವಿಪಕ್ಷ ನಾಯಕರು ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸುರ್ಜೇವಾಲಾ ಮಾತನಾಡಿ, ಇವೆಲ್ಲಾ ಕಂಗನಾ ಅವರ ವೈಯಕ್ತಿಕ ಮಾತುಗಳಾ? ಅಥವಾ ಬೇರೆ ಯಾರಾದರೂ ಮಾತನಾಡುವಂತೆ ಹೇಳಿದ್ದಾರಾ? ಹಾಗಾದರೆ ಈ ವಿಷಯದಲ್ಲಿ ಬಿಜೆಪಿ ಯಾಕೆ ಮೌನವಾಗಿದೆ ಎಂದು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕಂಗನಾರ ವಿವಾದಾತ್ಮಕ ಹೇಳಿಕೆಗಳು ಇದೇ ಮೊದಲಲ್ಲ. ಈ ಹಿಂದೆ ಕೂಡ ಕೇಂದ್ರ ಸರ್ಕಾರ ಹಿಂಪಡೆದ ಮೂರು ಕೃಷಿ ಕಾಯ್ದೆಗಳ ವಿಚಾರವಾಗಿ ಹಾಗೂ ರೈತರ ಹೋರಾಟದ ವಿಚಾರವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. 2020ರಲ್ಲಿ ದೆಹಲಿಯ ಶಹೀನ್ಭಾಗ್ನಲ್ಲಿ ಸಿಎಎ ವಿರೋಧಿ ಹೋರಾಟದ ವೇಳೆ ಪ್ರತಿಭಟನೆ ಮಾಡುತ್ತಿದ್ದ ಪಂಜಾಬ್ನ ರೈತ ಮಹಿಳೆಯೊಬ್ಬರನ್ನು ಬಿಲ್ಕಿಸ್ ಬಾನೋ ಎಂದು ತಪ್ಪಾಗಿ ಬಿಂಬಿಸಿದ್ದ ಕಂಗನಾ ರಣಾವತ್ ವಿವಾದಕ್ಕೆ ಕಾರಣವಾಗಿದ್ದರು. ಗುಜರಾತ್ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರಕ್ಕೆ ತುತ್ತಾಗಿದ್ದ ಮಹಿಳೆ ಎಂದು ಕಂಗನಾ ಬಿಂಬಿಸಿದ್ದು ವಿವಾದವಾಗಿತ್ತು. ಅಷ್ಟೇ ಅಲ್ಲ, ಮಹಿಳೆಯರು ಕೇವಲ 100 ರೂ. ಕೂಲಿಗೆ ಧರಣಿ ಮಾಡಲು ಬರುತ್ತಾರೆ ಎಂದೂ ನಾಲಿಗೆ ಹರಿಬಿಟ್ಟಿದ್ದರು.