ಯಾದಗಿರಿ:- ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಸೈದಾಪುರ ಪಟ್ಟಣದಲ್ಲಿ ಗಣಿತದಲ್ಲಿ ಕಡಿಮೆ ಅಂಕ ಪಡೆದ ನಾಲ್ಕನೇ ತರಗತಿಯ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಶಿಕ್ಷಕನೋರ್ವ ಬಾರಿಸಿರುವ ಘಟನೆ ಜರುಗಿದೆ.
ಶಿಕ್ಷಕನ ದುರ್ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸೈದಾಪುರ ಪಟ್ಟಣದ ಖಾಸಗಿ ಶಾಲಾ ಶಿಕ್ಷಕ ಡೆಲವಿನ್ ಎಂಬಾತ ವಿದ್ಯಾರ್ಥಿಗಳ ಮೇಲೆ ಇದೇ ರೀತಿ ಕ್ರೌರ್ಯ ಮೆರೆಯುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಈತ ಕುಮಾರ್ ಯುವರಾಜ್ ಎಂಬ ಬಾಲಕನನ್ನು ಅಮಾನುಷವಾಗಿ ಥಳಿಸಿದ್ದಾನೆ.
ಡೆಲವಿನ್ ವಿದ್ಯಾರ್ಥಿಯ ಬೆನ್ನಿಗೆ ಬಾಸುಂಡೆ ಬರುವಂತೆ ಥಳಿಸಿದ್ದಾನೆ ಎನ್ನಲಾಗಿದೆ. ಅಗಸ್ಟ್ 19 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಸೈದಾಪುರ ಠಾಣೆಯಲ್ಲಿ ಶಿಕ್ಷಕ ಡೆಲವಿನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಕೆಲವು ದಿನಗಳ ಹಿಂದೆ ವಿಜಯನಗರಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಹೋಮ್ ವರ್ಕ್ ಮಾಡದಿದ್ದಕ್ಕೆ ವಿದ್ಯಾರ್ಥಿನಿಗೆ ಕಾಲು ಊತ ಬರುವಂತೆ ಮುಖ್ಯ ಶಿಕ್ಷಕಿ ಬಾರಿಸಿದ್ದರು.