ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಕಾರಣಕ್ಕೆ ಗ್ಯಾರಂಟಿ ಭಾಗ್ಯಗಳನ್ನು ಘೋಷಣೆ ಮಾಡಿತ್ತು. ಅದರಂತೆ ಅಧಿಕಾರಕ್ಕೆ ಬಂದಿದ್ದು, ನೀಡಿದ ಆಶ್ವಾಸನೆ ಈಡೇರಿದೆಯಾದರೂ ಈಗ ಇದೇ ಈ ಸರ್ಕಾರಕ್ಕೆ ದೊಡ್ಡ ಮುಳುವಾಗಿದೆ ಎನ್ನಲಾಗಿದೆ.
ಸರ್ಕಾರ ಗ್ಯಾರಂಟಿ ಯೋಜನಗಳಿಗೆ ಭಾರೀ ಹಣವನ್ನು ಖರ್ಚು ಮಾಡುತ್ತಿವೆ. ಕೆಲವು ವರದಿಗಳ ಪ್ರಕಾರ ಸರ್ಕಾರವೇ ಖರ್ಚಾಗುತ್ತಿರುವ ಹಣ ನೋಡಿ ಬೆಚ್ಚಿದೆಯಂತೆ. ಈ ಕಾರಣಕ್ಕೆ ಈ ಯೋಜನೆಗಳಲ್ಲಿ ಕೆಲವು ಪರಿಷ್ಕರಣೆ ಮಾಡಬೇಕು ಅನ್ನೋ ಹೇಳಿಕೆಯನ್ನು ಸರ್ಕಾರದ ಕೆಲವು ಸಚಿವರು ಸಿಎಂಗೆ ತಿಳಿಸುತ್ತಿದ್ದಾರೆ ಎನ್ನಲಾಗಿದೆ. ಈ ರೀತಿ ಏನಾದರೂ ಆದರೆ ಎಪಿಎಲ್ ಕಾರ್ಡ್ ಹೊಂದಿರುವ ಯಾರಿಗಾದರೂ ಈ ಯೋಜನೆಗಳ ಪ್ರಯೋಜನ ಸಿಗುವುದಿಲ್ಲ ಎನ್ನಲಾಗಿದೆ.
ಅದಾಗ್ಯೂ ಸರ್ಕಾರ ತಳ್ಳಿಹಾಕುತ್ತಿದೆ. ನಾವು ಯಾವುದೇ ಪರಿಷ್ಕರಣೆ ಮಾಡುತ್ತಿಲ್ಲ ಎಂದು ಹೇಳುತ್ತಿದ್ದು, ಈಗ ಹೇಗೆ ಫಲಾನುಭವಿಗಳಿಗೆ ಸೌಲಭ್ಯ ನೀಡುತ್ತಿದ್ದೆವೋ ಅದನ್ನೇ ಮುಂದುವರೆಸಿಕೊಂಡು ಹೋಗುತ್ತೇವೆ ಅನ್ನೋ ಹೇಳಿಕೆ ನೀಡುತ್ತಿದೆ. ಈ ನಡುವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಸಹ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳು ಬಡ ಜನರ ಹಸಿವನ್ನು ನೀಗಿಸುತ್ತಿದ್ದು, ಅವು ಯಥಾವತ್ತಾಗಿ ಮುಂದುವರಿಯಲಿದೆ ಎಂದಿದ್ದಾರೆ.
ಇನ್ನು ಗೃಹಲಕ್ಷ್ಮಿ ಯೋಜನೆಯಡಿ ಸರ್ಕಾರ ಅರ್ಹ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳೂ ಸಹ ಹಣ ಹಾಕುತ್ತಿದೆ. ಆದರೆ ಕಳೆದ ಎರಡು ಮೂರು ತಿಂಗಳಿಂದ ಹಲವರ ಖಾತೆಗೆ ಜಮಾ ಆಗಿಲ್ಲ. ಪರಿಣಾಮ ಸರ್ಕಾರ ಈ ವಿಚಾರದಲ್ಲಿ ಏನೋ ಬದಲಾವಣೆ ಮಾಡಲು ಮುಂದಾಗಿದೆ ಅನ್ನೋ ಅನುಮಾನವನ್ನು ಉಂಟು ಮಾಡಿದೆ. ಹಾಗೆಯೇ ಅನ್ನಭಾಗ್ಯ ಯೋಜನೆಯಲ್ಲೂ ಸಹ ಕೆಲವು ಬದಲಾವಣೆಗಳಾಗಿದ್ದು, ಈ ನಡುವೆ ಯಾರಿಗೂ ಸಹ ಈ ಯೋಜನೆಗಳ ಲಾಭ ಪಡೆಯಲು ಹೊಸದಾಗಿ ಬಿಪಿಎಲ್ ಕಾರ್ಡ್ ನೀಡುವುದನ್ನೇ ನಿಲ್ಲಿಸಿಬಿಟ್ಟಿದೆ.