ಮಂಗಳೂರು: ಐವನ್ ಡಿಸೋಜ ಒಬ್ಬ ಮೆಂಟಲ್ ಗಿರಾಕಿ. ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ ಎಂದು ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರು ಆಡಿದ ಕೆಟ್ಟ ಮಾತು ಮತ್ತು ಮುಡಾ , ವಾಲ್ಮೀಖಿ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ರಾಜೀನಾಮೆಗೆ ಆಗ್ರಹಿಸಿ ನಡೆದ ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು,
ಐವನ್ ನನ್ನನ್ನು ಏನು ಮಾಡುತ್ತಾನೋ ಗೊತ್ತಿಲ್ಲ. ಹೆಲ್ಮೆಟ್ ಹಾಕಿದ ಇಬ್ಬರು ಐವನ್ ಮನೆ ಮೇಲೆ ಕಲ್ಲೂ ತೂರಾಟ ನಡೆಸಿದ್ದಾರೆ. ಇದನ್ನೂ ಇವನ ಹುಡುಗರಿಂದಲೇ ಮಾಡಿಸಿರಬಹುದು. ಇದಕ್ಕೂ ಆ ಇಬ್ಬರು ನಾನು ಹಾಗೂ ವೇದವ್ಯಾಸ್ ಕಾಮತ್ ಎಂದು ಕೇಸ್ ಹಾಕುತ್ತಾರೋ ಗೊತ್ತಿಲ್ಲ. ನಮ್ಮ ಮೇಲೆ ಸಾಕಷ್ಟು ಕೇಸ್ ಹಾಕಿದ್ದಾರೆ. ಇನ್ನೂ ರೌಡಿ ಶೀಟರ್ ಆಗಬಹುದೇನೋ ಗೊತ್ತಿಲ್ಲ ಎಂದರು. ಐವನ್ ರಾಜ್ಯಪಾಲರ ಮನೆಗೆ ನುಗ್ಗಿ ಹೊಡೆಯುತ್ತೇವೆ, ಓಡಿಸುತ್ತೇವೆ ಎಂದು ಹೇಳಿದರು. ಅವರ ಮೇಲೆ ಕೇಸ್ ಹಾಕಲು ಪೊಲೀಸರು ಹಿಂದೆ ಮುಂದೆ ನೋಡುತ್ತಾರೆ.
ಸರ್ಕಾರ ಇದೆ ಎಂಬ ಕಾರಣಕ್ಕೆ ಪೋಲೀಸರು ನಿಮ್ಮ ಆತ್ಮ ಸಾಕ್ಷಿಯಾಗಿ ಸರಿಯಾಗಿ ಕೆಲಸ ಮಾಡಿ. ಐವನ್ ಸ್ವಲ್ಪ ಮೆಂಟಲ್ ಆಗಿ ಬಾಯಿ ಬಂದಾಗೆ ಒದರುತ್ತಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ನಮಗೆ ಕಲ್ಲು ಹೊಡೆಯೋದಕ್ಕೆ ಟಯರ್ ಹಚ್ಚೋದಕ್ಕೆ 5 ನಿಮಿಷ ಸಾಕು. ನಮ್ಮ ಯುವ ಮೋರ್ಚಾ ಕಾರ್ಯಕರ್ತರು ತಯಾರಿದ್ದಾರೆ. ನಮಗೂ 10 ಟಯರ್ಗಳನ್ನು ಇಲ್ಲಿ ಸುಡಲು ಬರುತ್ತದೆ. ಆ ರೀತಿಯ ಅರಾಜಾಕತೆಯ ಪರಿಸ್ಥಿತಿ ತರುವ ಅವಶ್ಯಕತೆ ನಮಗಿಲ್ಲ ಎಂದು ಕಿಡಿಕಾರಿದರು.