ಕರ್ನಾಟಕ ರಾಜ್ಯ ಸರ್ಕಾರದ ಪಡಿತರ ಯೋಜನೆಯಡಿ ಅಕ್ಕಿ, ದವಸ, ಧಾನ್ಯಗಳು ಬಡವರಿಗೆ ಸಿಗುವಂತೆ ಮಾಡಲು ಬಿಪಿಎಲ್ ನಂತಹ ಪಡಿತರ ಕಾರ್ಡ್ಗಳನ್ನು ನೀಡಿದೆ. ಆದರೆ ಈ ಬಿಪಿಎಲ್ ಕಾರ್ಡ್ಗಳು ಅರ್ಹತೆ ಇಲ್ಲದ, ಶ್ರೀಮಂತರು, ಸರ್ಕಾರಿ ಉದ್ಯೋಗ ಹೊಂದಿರುವವರು ಪಡೆದಿರುವುದು ಪತ್ತೆಯಾಗಿದೆ. ಈ ಸಂಬಂಧ ನೋಟಿಸ್ ಜಾರಿ ಮಾಡಲಾಗಿದೆ.
ಅಧಿಕ ಆದಾಯ ಇರುವ ಒಟ್ಟು 32,092 ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿರುವ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಇದರಲ್ಲಿ 391 ಮಂದಿ ಸರ್ಕಾರಿ ಉದ್ಯೋಗ ಹೊಂದಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಗಳಿಸುವ 2000ಕ್ಕೂ ಹೆಚ್ಚು ಕುಟುಂಬಗಳಿವೆ. ನಿಗದಿತ ಆದಾಯ (1.20ಕ್ಕೂ) ಹೆಚ್ಚು ವಾರ್ಷಿಕ ವರಮಾನ ಹೊಂದಿರುವ 29000 ಕುಟುಂಬಗಳ ಪತ್ತೆ ಆಗಿವೆ.
ಆದಾಯ ತೆರಿಗೆ ಪಾವತಿದಾರರು, ಜಿಎಸ್ಟಿ ಮತ್ತು ವೃತ್ತಿ ತೆರಿಗೆ ಪಾವತಿದಾರರು ಸೇರಿ ಆರ್ಥಿಕ ಸಬಲರು ಸುಳ್ಳು ದಾಖಲೆಗಳನ್ನು ನೀಡಿ ಪಡೆದಿರುವ ಕಾರ್ಡ್ಗಳನ್ನು ಆಯಾ ತಾಲೂಕು ಕಚೇರಿಗೆ ಹಿಂದಿರುಗಿಸಬೇಕು. ಒಂದು ವೇಳೆ ಕಾರ್ಡ್ ವಾಪಸ್ ನೀಡದಿದ್ದಲ್ಲಿ ಸರ್ಕಾರವೇ ಪತ್ತೆ ಮಾಡಲಿದೆ ಎಂದು ಚಾಟಿ ಬೀಸಿದೆ.
ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತರು ಎಚ್.ಆರ್.ಎಂ.ಎಸ್ ದತ್ತಾಂಶದಿಂದ ಸರಕಾರಿ ನೌಕರರು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುರಿತು ಮಾಹಿತಿಯನ್ನು ಕಲೆಹಾಕಿ ಜಿಲ್ಲೆಯಲ್ಲಿ 391 ಸರಕಾರಿ ನೌಕರ ಕುಟುಂಬಗಳು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಬಗ್ಗೆ ಪಡಿತರ ಚೀಟಿ ಸಂಖ್ಯೆಯೊಂದಿಗೆ ಮಾಹಿತಿಯನ್ನು ಆಗಸ್ಟ್ 6ರಂದು ಕಳುಹಿಸಿದ್ದು,
391 ಮಂದಿ ಸರ್ಕಾರಿ ಅಧಿಕಾರಿಗಳು ಸರ್ಕಾರಕ್ಕೆ ಮೋಸ ಮಾಡಿದ್ದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಕಳೆದ ಮೂರು ವರ್ಷಗಳಿಂದ ಯಾವೆಲ್ಲ ನೌಕರರು ಪಡೆದಿರುವ ಪಡಿತರ ಮೊತ್ತ ಕಲೆ ಹಾಕಬೇಕು. ನಿಯಮಾನುಸಾರ ನೋಟಿಸ್ ಜಾರಿ ಮಾಡಬೇಕು. ಇನ್ನೂ ಪಡೆದ ಪಡಿತರ ಮೌಲ್ಯದಷ್ಟು ಹಣವನ್ನು ಅವರಿಂದ ದಂಡವಾಗಿ ವಸೂಲಿಗೆ ಮಾಡುವುದರ ಜೊತೆಗೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.
ಇಂತಹ ಅರ್ಹತೆ ಇಲ್ಲದೇ, ಅನರ್ಹತೆ ಇದ್ದರೂ ಪಡಿತರ ಚೀಟಿ ಪಡೆದವರು ಇದೇ ಆಗಸ್ಟ್ 31ರೊಳಗೆ ನಿಮ್ಮ ಹತ್ತಿರ ತಾಲೂಕು ಕಚೇರಿ (ತಹಶೀಲ್ದಾರ್ ಕಚೇರಿ)ಗೆ ಹೋಗಿ ರದ್ದುಗೊಳಿಸಬೇಕು. ಇನ್ನೂ ಹೆಸರು ಸೇರಿವುದು, ಹೆಸರು ತೆಗೆಯುವುದ ಸೇರಿದಂತೆ ತಿದ್ದುಪಡಿ ಮಾಡಿಕೊಳ್ಳುವವರು ಆಗಸ್ಟ್ ತಿಂಗಳೇ ಕೊನೆಯ ಅವಕಾಶವಾಗಿದೆ.