ಮಂಡ್ಯ:- ಮಂಡ್ಯದ ಮೈಶುಗರ್ ಕಾರ್ಖಾನೆ 5 ದಿನಗಳಿಂದ ಸ್ಥಗಿತಗೊಂಡಿದೆ. ತಾಂತ್ರಿಕ ಸಮಸ್ಯೆಯ ಕಾರಣ ನೀಡಿ, ಕಬ್ಬು ಅರೆಯುವಿಕೆ ಸ್ಥಗಿತಗೊಂಡಿದ್ದು, ಇದರಿಂದಾಗಿ ಕಷ್ಟಪಟ್ಟು ರೈತರು ಬೆಳೆದಿದ್ದ ಕಬ್ಬು ಬಿಸಿಲಿನಲ್ಲಿ ಒಣಗುತ್ತಿದೆ. ಇದೀಗ ಲಾಭವಲ್ಲ, ತಮ್ಮ ಬಂಡವಾಳವೂ ಬರದ ಸ್ಥಿತಿಗೆ ಅನ್ನದಾತ ಬಂದಿದ್ದು, ಕಾರ್ಖಾನೆಯ ಅಧಿಕಾರಿಗಳ ವಿರುದ್ದ ರೈತರು ಹಿಡಿಶಾಪ ಹಾಕುತ್ತಿದ್ದಾರೆ.
ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಖಂಡಿಸಿ ದಾಸರಹಳ್ಳಿಯಲ್ಲಿ ಪ್ರತಿಭಟನೆ!
ಅಂದಹಾಗೆ 1932ರಲ್ಲಿ ಸ್ಥಾಪನೆಯಾಗಿರುವ ಮೈಶುಗರ್ ಸಕ್ಕರೆ ಕಾರ್ಖಾನೆ ಸಾಕಷ್ಟು ಹಳೆಯದಾದ ಕಾರ್ಖಾನೆ. ಈ ಹಿಂದೆ ಕಾರ್ಖಾನೆ ಸಾಕಷ್ಟು ನಷ್ಟ ಅನುಭವಿಸಿತ್ತು. ಕೆಲ ವರ್ಷಗಳ ಕಾಲ ಬಂದ್ ಕೂಡ ಆಗಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ 50 ಕೋಟಿ ಹಣವನ್ನ ಬಿಡುಗಡೆ ಮಾಡಿತ್ತು.
ಹೀಗಾಗಿ ಕಳೆದ ವರ್ಷ 2 ಲಕ್ಷ 41 ಸಾವಿರ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಈ ಬಾರಿ ಕೂಡ ರೈತರ ಬಳಿ ಕಬ್ಬು ಒಪ್ಪಿಗೆಯಾಗಿದ್ದು, 2 ಲಕ್ಷ 50 ಸಾವಿರ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿಯನ್ನ ಹೊಂದಲಾಗಿದೆ. ಜೂನ್ 30ರಂದೇ ಕಬ್ಬು ಅರಿಯುವಿಕೆಗೆ ಚಾಲನೆ ಸಹ ನೀಡಲಾಗಿದೆ. ಆಗಸ್ಟ್ 2ರಿಂದ ಕಬ್ಬು ಅರೆಯುವಿಕೆ ಕೆಲಸ ನಡೆಯುತ್ತಿದೆ.
ಹೀಗಾಗಿ ಒಪ್ಪಿಗೆ ಮಾಡಿಕೊಂಡ ರೈತರು ಎತ್ತಿನ ಗಾಡಿಗಳ ಮೂಲಕ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುತ್ತಿದ್ದಾರೆ. ಆದರೆ, ತಾಂತ್ರಿಕ ಕಾರಣವನ್ನ ಮುಂದಿಟ್ಟು ಐದು ದಿನಗಳಿಂದ ಕಾರ್ಖಾನೆಯನ್ನ ಸ್ಥಗಿತ ಮಾಡಲಾಗಿದೆ.
ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಈಗಾಗಲೇ ಒಪ್ಪಿಗೆ ಆಗಿರುವ ಹಿನ್ನೆಲೆಯಲ್ಲಿ ಕಬ್ಬನ್ನ ಬೇರೆಯವರಿಗೂ ಮಾರಾಟ ಮಾಡದಂತಹ ಪರಿಸ್ಥಿತಿಯಲ್ಲಿ ರೈತರು ಇದ್ದಾರೆ. ಪದೇ ಪದೇ ಈ ರೀತಿಯ ಘಟನೆಗಳು ಕಾರ್ಖಾನೆಯಲ್ಲಿ ನಡೆಯುತ್ತಿದ್ದು, ಕಾರ್ಮಿಕರಿಗೂ ಕೂಡ ಕೆಲಸ ಇಲ್ಲದಂತಾಗಿದೆ.