ಮಂಡ್ಯ :- ಮದ್ದೂರು ತಾಲೂಕಿನ ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವಲ್ಲಿ ಹಾಗೂ ನಾಲೆಗಳಿಗೆ ನೀರು ಹರಿಸುವಲ್ಲಿ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲೆಯ ಶಾಸಕರು ಯಾವುದೇ ಕ್ರಮ ಕೈಗೊಳ್ಳದೆ ಕಾಲಹರಣ ಮಾಡುವ ಮೂಲಕ ರೈತ ವಿರೋಧಿ ಅನುಸರಿಸುತ್ತಿದ್ದಾರೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅಕ್ರೋಶ ವ್ಯಕ್ತಪಡಿಸಿದರು.
ಮದ್ದೂರು ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಶುಕ್ರವಾರ ರೈತರೊಂದಿಗೆ ಆಗಮಿಸಿ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ನಂಜುಂಡೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜು ಅವರನ್ನು ತರಾಟೆಗೆ ತೆಗೆದುಕೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಆರ್.ಎಸ್ ಅಣೆಕಟ್ಟೆಯಿಂದ ಸಾಕಷ್ಟು ನೀರು ವ್ಯರ್ಥವಾಗಿ ನದಿಯಲ್ಲಿ ಹರಿದು ತಮಿಳುನಾಡಿಗೆ ಸೇರುತ್ತಿದ್ದರು ಕೊನೆ ಭಾಗಕ್ಕೆ ನೀರು ಹರಿಸಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ನಾನು ಶಾಸಕ, ಸಚಿವನಾಗಿದ್ದ ವೇಳೆ ರೈತರ ಅನುಕೂಲಕ್ಕಾಗಿ ಹಲವು ಹೊಸ ಯೋಜನೆಗಳ ಪಟ್ಟಿ ಮಾಡಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಗಮನಕ್ಕೆ ತಂದು ತುರ್ತಾಗಿ ಕಾಮಗಾರಿ ಕೈಗೊಳ್ಳುವಂತೆ ಮನವಿ ಮಾಡಿದ್ದರು ಇದುವರೆಗೂ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಎರಡನೇ ಬಾರಿಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದರು ಸಹ ಕಾಮಗಾರಿ ಪ್ರಾರಂಭ ಮಾಡದಿರುವುದು ಶೋಚನೀಯ ಸಂಗತಿ ಎಂದರು.
ಉತ್ತಮ ಮಳೆಯಾಗಿ ಕೆ.ಆರ್.ಎಸ್ ತುಂಬಿ ತಮಿಳುನಾಡಿಗೆ ನೀರು ಹೋಗುತ್ತಿದೆ, ಜಿಲ್ಲೆ ಸೇರಿದಂತೆ ತಾಲೂಕಿನ ಕೆರೆ,ಕಟ್ಟೆಗಳಿಗೆ ನೀರು ಹರಿಸಿದ್ದರೆ 6 ಟಿಎಂಸಿ ನೀರು ಸಾಕಾಗುತ್ತಿತ್ತು, ತಮಿಳುನಾಡಿಗೆ 80 ಟಿಎಂಸಿ ನೀರು ಹರಿದು ಹೋದರು ಯಾರು ಕೇಳಲಿಲ್ಲ. ನಮ್ಮ ರೈತರ ಬಗ್ಗೆ ಇವರಿಗೆ ಕಾಳಜಿ ಇದ್ದಿದ್ದರೆ ಎಲ್ಲಾ ಕೆರೆಕಟ್ಟೆಗಳಿಗೆ ಮೊದಲು ನೀರು ತುಂಬಿಸುವ ಕೆಲಸ ಮಾಡುತ್ತಿದ್ದರು. ನೀರಿಗೆ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂದರು.
ಸರ್ಕಾರ ಕೆರೆಗಳಿಗೆ ನೀರು ತುಂಬಿಸಲು ಯಾವುದೇ ಯೋಜನೆ ತಂದಿಲ್ಲ. ಜಿಲ್ಲೆಗೆ 90 ಕೋಟಿ ರೂ. ವೆಚ್ಚದಲ್ಲಿ ನಾಲೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಹಾಗೂ ಪ್ರತ್ಯೇಕವಾಗಿ ಪೈಪ್ ಲೈನ್ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸಿದ್ಧಪಡಿಸಿ ತಾಲೂಕಿಗೆ 8.22 ಕೋಟಿ ಅನುದಾನದಲ್ಲಿ ಪೈಪ್ ಲೈನ್ ಅಳವಡಿಸಿ ಅಭಿವೃದ್ಧಿಗೊಳಿಸಬೇಕೆಂಬ ಹೊಸ ಯೋಜನೆಯನ್ನು ಕೈಗೊಂಡಿತಾದರೂ ಹಣ ಬಿಡುಗಡೆಯಾಗದೆ ಕಾರ್ಯರೂಪಕ್ಕೆ ಬರದೆ ನೀರಾವರಿ ಇಲಾಖೆಯಲ್ಲಿ ಸಿದ್ಧಪಡಿಸಿದ ಕ್ರಿಯಾ ಯೋಜನೆ ನೀರಾವರಿ ನಿಗಮದಲ್ಲೇ ದೂಳು ಹಿಡಿಯುತ್ತಿದೆ
ಅದು ಜಾರಿಗೆ ಬಂದಿದ್ದರೆ ಕಡಿಮೆ ಅವಧಿಯಲ್ಲಿ ತಾಲೂಕಿನ ಎಲ್ಲಾ ಕೆರೆಗಳಿಗೆ ಬೇಗ ನೀರು ತುಂಬಿಸಬಹುದಾಗಿತ್ತು ಎಂದರು.
ಎನ್.ಚಲುವರಾಯಸ್ವಾಮಿ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವರಾಗಿದ್ದು ಹಲವು ಯೋಜನೆಗಳನ್ನ ಜಾರಿಗೆ ತರಲಿ ನಮ್ಮ ಸಹಕಾರವು ಇರುತ್ತದೆ. ಅದರೆ, ಸರ್ಕಾರ ಉಳಿಸಿಕೊಳ್ಳಲು ಕಾಲ ಕಳೆಯುತ್ತಿದ್ದಾರೆ ಕಿಡಿಕಾರಿದರು.
ತನಿಖೆಗೆ ಆಗ್ರಹ
ಮದ್ದೂರು ಪಟ್ಟಣದ ಪುರಾಣ ಪ್ರಸಿದ್ದ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ನಿರ್ಮಿಸಿದ್ದ ತಡೆಗೋಡೆಯನ್ನು 90 ಲಕ್ಷದಲ್ಲಿ ನಿರ್ಮಾಣ ಮಾಡಲಾಗಿತ್ತು. ಕಳಪೆ ಕಾಮಗಾರಿಯಿಂದ ನದಿಯಲ್ಲಿ ನೀರು ಹೆಚ್ಚು ಬಂದಾಗ ತಡೆ ಗೋಡೆ ಕುಸಿದು ಬಿದ್ದು ಸರ್ಕಾರ 90 ಲಕ್ಷ ರೂ.ಹಣ ವ್ಯರ್ಥವಾಯಿತು. ಮತ್ತೆ 3 ಕೋಟಿ ಹಣ ಬಿಡುಗಡೆ ಮಾಡಿ ಕೆಲಸ ಮಾಡಿಸುತ್ತಿದ್ದಾರೆ. ಹಿಂದೆ ಕಳಪೆ ಕಾಮಗಾರಿ ಬಗ್ಗೆ ತನಿಖೆ ಮಾಡಿಸಿ ಸಂಬಂಧಪಟ್ಟ ಗುತ್ತಿಗೆದಾರರ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನೆ ಮಾಡಿದರು. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಆಗ್ರಹಿಸಿದರು.
ಇದೇ ವೇಳೆ ಮುಖಂಡರಾದ ರಾಮಲಿಂಗಯ್ಯ, ಪ್ರಸನ್ನ, ಸುರೇಶ, ಕೆಂಪಣ್ಣ, ಸುಧೀರ್, ರಾಜೇಶ, ಶೇಖರ, ಶಿವಣ್ಣ, ಕೃಷ್ಣಸ್ವಾಮಿ, ಮಲ್ಲರಾಜು, ಶಂಕರ್, ಕಾಳಿರಯ್ಯ, ನಾಗರಾಜು ಮತ್ತಿತರರು ಹಾಜರಿದ್ದರು.