ಆರೋಗ್ಯ ಸಮಸ್ಯೆಗಳಿಗೆ ಹೊಂದಿಕೊಂಡಂತೆ ಗಂಟಲು ನೋವು ಬಹುತೇಕ ಜನರಲ್ಲಿ ಸಾಮಾನ್ಯವಾಗಿರುತ್ತದೆ. ಯಾರಿಗೆ ಗಂಟಲು ನೋವು ಹೆಚ್ಚಾಗಿರುತ್ತದೆ ಅವರಿಗೆ ರಾತ್ರಿಯ ಸಮಯದಲ್ಲಿ ನಿದ್ರೆ ಬರುವುದಿಲ್ಲ, ಏನನ್ನಾದರೂ ತಿನ್ನಲು, ಕುಡಿಯಲು, ನುಂಗಲು ಕಷ್ಟವಾಗುತ್ತದೆ.
ಎಲ್ಲಾ ಕಾಲದಲ್ಲಿಯೂ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಗಂಟಲು ನೋವು ಕೂಡ ಒಂದು. ಅನೇಕ ಕಾರಣಗಳಿಗೆ ಅನೇಕ ವಿಧಗಳಲ್ಲಿ ಬರುವ ಗಂಟಲು ನೋವು ಅತಿಯಾದ ಹಿಂಸೆ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಗಂಟಲು ನೋವು ಹೆಚ್ಚಾದಾಗ ತಲೆನೋವು ಜೊತೆಗೆ ಕಿವಿನೋವು ಕೂಡಾ ಜಾಸ್ತಿಯಾಗುತ್ತಾ ಹೋಗುತ್ತದೆ. ಕೆಲವರಲ್ಲಿ ರಾತ್ರಿ ಮಲಗುವಾಗ ಗಂಟಲು ನೋವು ಹೆಚ್ಚಾಗಿ ಕಾಣಿಸಿ ಕೊಳ್ಳುತ್ತದೆ. ಹೀಗೆ ಗಂಟಲು ನೋವಾದಾಗ ಮನೆಯಲ್ಲಿಯೇ ಯಾವ ರೀತಿಯಾಗಿ ಮನೆಮದ್ದು ಮಾಡಬಹುದು ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ…….
ಶುಂಠಿ ಕಷಾಯ:-
ಶೀತ, ನೆಗಡಿ ಕೆಮ್ಮು ಆದಾಗ ಹೇಗೆ ಶುಂಠಿ ಕಷಾಯ ಮಾಡಿ ಕುಡಿಯುವ ಹಾಗೆಯೇ ಗಂಟಲು ನೋವಿಗೂ ಸಹ ಶುಂಠಿ ಕಷಾಯ ಮಾಡಿ ಕುಡಿಯುವುದು ತುಂಬಾ ಒಳ್ಳೆಯದು.
ಇದನ್ನು ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ನೀರನ್ನು ಕುದಿಯಲು ಇಟ್ಟು , ಇದಕ್ಕೆ ಚೆನ್ನಾಗಿ ಶುಂಠಿಯನ್ನು ತೊಳೆದು ಬಿಡಿಸಿ ಸಿಪ್ಪೆ ತೆಗೆದು, ಜಜ್ಜಿ ಕುದಿಯುವ ನೀರಿಗೆ ಹಾಕಿ ನಂತರ ಸ್ವಲ್ಪ ಬೆಲ್ಲ ಅಥವಾ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಕುದಿಸಬೇಕು.
ಇದನ್ನು ನಿಮಗೆ ಸಾಧ್ಯವಾದಷ್ಟು ಬಿಸಿಯಲ್ಲಿ ಕುಡಿಯುವುದ ರಿಂದ ಗಂಟಲು ನೋವಿಗೆ ಆರಾಮದಾಯಕ ವಾಗುತ್ತದೆ. ಮತ್ತು ನೋವು ಕೂಡಾ ಕಡಿಮೆಯಾಗುತ್ತದೆ. ಶುಂಠಿಯಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶವಿರುವುದರಿಂದ ಇದು ಸೋಂಕಿನ ವಿರುದ್ದ ಹೋರಾಡಿ ನೋವನ್ನು ಶಮನ ಮಾಡುವಲ್ಲಿ ಸಹಕಾರಿಯಾಗುತ್ತವೆ.
ಹಾಲು ಮತ್ತು ಅರಶಿನ:-
ಬಿಸಿ ಹಾಲಿನ ಜೊತೆ ಸ್ವಲ್ಪ ಅರಸಿನವನ್ನು ಬೆರೆಸಿ ಕುಡಿಯುವುದ ರಿಂದ ಗಂಟಲು ನೋವನ್ನು ಶಮನಗೊಳಿಸಬಹುದು. ಅರಶಿನ ದಲ್ಲಿ ಸಾಕಷ್ಟು ಕಾಯಿಲೆಗಳನ್ನು ಗುಣಪಡಿಸುವ ಅಂಶವಿದೆ.
ಇದರಲ್ಲಿ,ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಅಂಶವಿರುವುದರಿಂದ ಗಂಟಲು ನೋವಿಗೆ ಪರಿಣಾಮಕಾರಿ ಯಾಗಬಲ್ಲದು. ಇದರಿಂದ ಕಫ ಕಡಿಮೆಯಾಗುತ್ತದೆ ಅಲ್ಲದೆ ಇದು ಮಕ್ಕಳಿಗೆ ಕೂಡಾ ತುಂಬಾ ಒಳ್ಳೆಯದು.
ಪುದಿನಾ ಎಲೆಗಳ ಜೊತೆಗೆ ಕರಿಮೆಣಸನ್ನು ತೆಗೆದುಕೊಂಡು ಅದರ ಜೊತೆಗೆ ಜೇನುತುಪ್ಪ ಅಥವಾ ಬೆಲ್ಲ ಬೆರೆಸಿ ಚೆನ್ನಾಗಿ ನೀರಿನಲ್ಲಿ ಕುದಿಸಿ ಸೋಸಿ ಕುಡಿಯುವುದರಿಂದ ಗಂಟಲು ನೋವಿನ ಸಮಸ್ಯೆಯನ್ನು ಬಗೆಹರಿಸ ಬಹುದು. ರಾತ್ರಿ ಮಲಗುವುದಕ್ಕಿಂತ ಮೊದಲು ಈ ಕಷಾಯವನ್ನು ಮಾಡಿ ಕುಡಿದಲ್ಲಿ ಗಂಟಲು ನೋವನ್ನು ಕಡಿಮೆ ಮಾಡಬಹುದು.
ಕಷಾಯ ಕುಡಿಯಲು ಕಷ್ಟ ಎನಿಸಿದಲ್ಲಿ ನಾಲ್ಕು ಕಾಳು ಕರಿಮೆಣಸು ಮತ್ತು ಒಂದೆಸಳು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಬಾಯಿಯಲ್ಲಿ ಚೆನ್ನಾಗಿ ಜಗಿದು ಅದರ ರಸವನ್ನು ತೆಗೆದುಕೊಳ್ಳುತ್ತಿರಬೇಕು.
ಹೀಗೆ ಮಾಡುವುದರಿಂದ ಬೇಗನೇ ಗಂಟಲು ನೋವು , ಒಣಕೆಮ್ಮಿನಂತಹ ಸಮಸ್ಯೆಗಳು ಶಮನವಾಗುತ್ತದೆ. ಬೆಳ್ಳುಳ್ಳಿಯಲ್ಲಿ ಜೌಷಧೀಯ ಅಂಶಗಳು ಹೆಚ್ಚಾಗಿರುವುದರಿಂದ ಇದು ನೋವು ನಿವಾರಿಸುವಲ್ಲಿ ಸಹಾಯಕ. ಅಲ್ಲದೆ ಮೆಣಸಿನ ಖಾರದ ಅಂಶವು ಗಂಟಲು ನೋವಿಗೆ ಆರಾಮ ನೀಡುತ್ತದೆ.
ದೊಡ್ಡಪತ್ರೆ ಎಲೆಯನ್ನು ಹಾಗೆಯೇ ತೊಳೆದು ಅದರ ಮೇಲೆ ಸ್ವಲ್ಪ ಕಲ್ಲು ಉಪ್ಪನ್ನು ಹಾಕಿ ಹಸಿಯಾಗಿಯೇ ಜಗಿದು ತಿಂದು ಅದರ ರಸವನ್ನು ಕುಡಿಯುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ.
ಅಥವಾ ದೊಡ್ಡ ಪತ್ರೆ ಎಲೆ ಮತ್ತು ತುಳಸಿ ಎಲೆಯನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಕುಡಿಯುವುದ ರಿಂದ ಗಂಟಲು ನೋವು ಕಡಿಮೆಯಾಗುತ್ತದೆ. ಮಕ್ಕಳಿಗೆ ಇದರ ಕಷಾಯ ಮಾಡಿ ಕುಡಿಸುವುದು ಉತ್ತಮ.