ಭೀಮನ ಅಮವಾಸ್ಯೆಯು ಮಹಿಳೆಯರು ಆಚರಿಸುವ ಪ್ರಮುಖ ಹಿಂದೂ ಆಚರಣೆಯಾಗಿದೆ. ಭೀಮನ ಅಮವಾಸ್ಯೆಯನ್ನು ಭೀಮನ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಕ್ಯಾಲೆಂಡರ್ ಪ್ರಕಾರ, ಭೀಮನ ಅಮವಾಸ್ಯೆಯನ್ನು ಆಷಾಢ ಮಾಸದಲ್ಲಿ ಆಚರಿಸಲಾಗುತ್ತದೆ. ಇಂದು ಅಂದರೆ ಆಗಸ್ಟ್ 4ರಂದು ಭೀಮನ ಅಮಾವಾಸ್ಯೆಯನ್ನ ಆಚರಿಸಲಾಗುತ್ತಿದ್ದು, ಈ ದಿನ ಮಹಿಳೆಯರು ಉತ್ತಮ ದಾಂಪತ್ಯ ಜೀವನಕ್ಕಾಗಿ ಉಪವಾಸವನ್ನು ಆಚರಿಸುತ್ತಾರೆ.
Egg Benefits:ನಿತ್ಯ ಮೊಟ್ಟೆ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?
ಭೀಮನ ಅಮಾವಾಸ್ಯೆಯ ದಿನದಂದು ಪತಿ ಪಾದ ಪೂಜೆಗೆ ಹೆಚ್ಚಿನ ಪ್ರಾಧಾನ್ಯತೆಯಿದೆ. ಈ ದಿನ ವಿವಾಹಿತ ಮಹಿಳೆಯರು ಪತಿಯ ಪಾದ ಪೂಜೆಯನ್ನು ಮಾಡುವ ಮೂಲಕ ಅವರ ದೀರ್ಘಾಯುಷ್ಯದ ವರವನ್ನು ದೇವರಲ್ಲಿ ಬೇಡುತ್ತಾರೆ. ಭೀಮನ ಅಮಾವಾಸ್ಯೆ ದಿನದಂದು ಪತಿ ಪಾದ ಪೂಜೆ ಮಾಡುವುದು ಹೇಗೆ.? ಈ ಪೂಜೆಗೆ ಬೇಕಾಗುವ ಸಾಮಾಗ್ರಿಗಳಾವುವು ಎಂಬುದನ್ನು ಈ ಲೇಖನದಲ್ಲಿ ನೋಡಿ..
1. ಭೀಮನ ಅಮಾವಾಸ್ಯೆ ಪತಿ ಪೂಜೆಗೆ ಬೇಕಾಗುವ ಸಾಮಾಗ್ರಿಗಳು:
– ಕುರ್ಚಿ ಅಥವಾ ಮಣೆ
– ಅರಿಶಿನ ದಾರ ಅಥವಾ ದಾರ
– ಹೂವುಗಳು – 2 ಅಥವಾ 3 ರೀತಿಯ ಹೂವುಗಳು (ಗುಲಾಬಿ, ಸೇವಂತಿಗೆ, ಮಲ್ಲಿಗೆ ಅಥವಾ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಯಾವುದೂ ಆಗಬಹುದು.
– ಅರಿಶಿನ
– ಕುಂಕುಮ
– ಅಕ್ಕಿ ಅಥವಾ ಅಕ್ಷತೆ
– ತೆಂಗಿನ ಎಣ್ಣೆ
– ನೀರು
– ತಟ್ಟೆ
– ಕರ್ಪೂರ
– ಆರತಿ ತಟ್ಟೆ
– ಅಗರಬತ್ತಿ
– ಕೆಂಪು ನೀರು
– ಎರಡು ದೀಪ
– ದೀಪ ಹಚ್ಚಲು ಬತ್ತಿ
– ಸುಣ್ಣ
– ದೀಪದ ಎಣ್ಣೆ
. ಪತಿ ಪಾದ ಪೂಜೆ ಮಾಡುವುದು ಹೇಗೆ.?
ಕೆಲವೊಬ್ಬರಿಗೆ ಅದರಲ್ಲೂ ನವವಿವಾಹಿತರಿಗೆ ಮದುವೆಯ ಮೊದಲ ವರ್ಷ ಭೀಮನ ಅಮಾವಾಸ್ಯೆ ದಿನದಂದು ಪತಿ ದೇವರ ಪಾದ ಪೂಜೆ ಮಾಡುವುದು ಹೇಗೆ ಎಂಬುದು ತಿಳಿದಿರುವುದಿಲ್ಲ. ಅಂತಹ ಸಂದರ್ಭದಲ್ಲಿ ನೀವೂ ನಿಮ್ಮ ಪತಿಯನ್ನು ಸರಿಯಾದ ವಿಧಾನಗಳ ಮೂಲಕ ಪೂಜಿಸಲು ಬಯಸಿದರೆ ಈ ಲೇಖನ ಓದಿ..
– ಈ ದಿನ ಮೊದಲು ಪತಿ ಪತ್ನಿಯರಿಬ್ಬರೂ ಶುದ್ಧರಾಗಿ ಹೊಸ ಬಟ್ಟೆಯನ್ನು ಧರಿಸಬೇಕು.
– ಹತ್ತಿರದ ಶಿವ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ. ಒಂದು ವೇಳೆ ಇದು ಸಾಧ್ಯವಾಗದೇ ಇದ್ದರೆ ಮನೆಯಲ್ಲೇ ದೇವರ ಪೂಜೆಯನ್ನು ಮಾಡಬಹುದು.
– ನಂತರ ಪತಿಯನ್ನು ಒಂದು ಮಣೆ ಅಥವಾ ಕುರ್ಚಿಯ ಮೇಲೆ ಕುಳಿಸಿ.
ಅರಿಶಿನ ದಾರವಿದ್ದರೆ ಉತ್ತಮ ಅಥವಾ ನೀವೇ ಬಿಳಿ ಬಣ್ಣದ ದಾರವನ್ನು 3-4 ಎಳೆ ಮಾಡಿ ಮಧ್ಯ ಭಾಗದಲ್ಲಿ ಒಂದು ಸೇವಂತಿಗೆ ಹೂವನ್ನು ಕಟ್ಟಿ.
– ಈ ದಾರಕ್ಕೆ 3,5 ಅಥವಾ 9 ಗಂಟುಗಳನ್ನು ಹಾಕಿ. ಪತಿ ಪತ್ನಿಯ ಬಲಗೈ ಮಣಿಕಟ್ಟಿನ ಮೇಲೆ, ಪತ್ನಿ ಪತಿಯ ಬಲಗೈ ಮಣಿಕಟ್ಟಿನ ಮೇಲೆ ಈ ದಾರವನ್ನು ಕಟ್ಟಬೇಕು.
– ಬಳಿಕ ಪತಿ ಪತ್ನಿಯ ಹಣೆಗೆ ಅರಿಶಿನ, ಕುಂಕುಮವನ್ನಿಟ್ಟು ಹೂವನ್ನು ಮುಡಿಸಬೇಕು.
– ನಂತರ ಒಂದು ತಟ್ಟೆಯನ್ನು ಮತ್ತು ಒಂದು ಬಿಂದಿಗೆ ನೀರನ್ನು ತೆಗೆದುಕೊಂಡು ಪತಿಯ ಪಾದಗಳನ್ನು ಆ ತಟ್ಟೆಯಲ್ಲಿ ಇರಿಸಿ ನೀರಿನಿಂದ ಪತಿಯ ಪಾದಗಳನ್ನು ತೊಳೆಯಬೇಕು.
ಪಾದ ತೊಳೆದ ನೀರನ್ನು ಎಸೆದು, ಅದೇ ತಟ್ಟೆಯಲ್ಲಿ ಮತ್ತೊಮ್ಮೆ ಪತಿಯ ಕಾಲುಗಳನ್ನು ಇರಿಸಿ, ಪಾದಗಳಿಗೆ ಅರಿಶಿನ, ಕುಂಕುಮ ಹಚ್ಚಿ ಹೂವನ್ನು ಅರ್ಪಿಸಬೇಕು.
– ಇದರ ನಂತರ ಅಗರಬತ್ತಿಯನ್ನು ಬೆಳಗಿ, ಕರ್ಪೂರದಿಂದ ಆರತಿಯನ್ನು ಮಾಡಿ. ಪತಿಯ ಹಣೆಗೆ ಕುಂಕುಮವನ್ನಿಡಿ.
ಆರತಿಯ ಬಳಿಕ ಅಕ್ಷತೆಯನ್ನು ಪತಿಯ ಕೈಗೆ ಕೊಟ್ಟು ಅವರಿಂದ ಅಕ್ಷತೆಯನ್ನು ಹಾಕಿಸಿಕೊಂಡು ಆಶೀರ್ವಾದ ಪಡೆಯಿರಿ. ಒಂದು ವೇಳೆ ಅಕ್ಷತೆ ಇಲ್ಲದಿದ್ದರೆ ಅಕ್ಕಿಗೆ ಅರಿಶಿನ, ಕುಂಕುಮ ಮತ್ತು ತೆಂಗಿನ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿಕೊಂಡು ಅಕ್ಷತೆಯನ್ನು ಸಿದ್ಧಗೊಳಿಸಿಕೊಳ್ಳಿ.
ನಂತರ ಪತಿಗೆ ದೃಷ್ಟಿಯನ್ನು ತೆಗೆಯುವುದಕ್ಕಾಗಿ, ಒಂದು ಚಿಕ್ಕ ತಟ್ಟೆಯಲ್ಲಿ ದೀಪದ ಎಣ್ಣೆಯಿಂದ ಎರಡು ದೀಪಗಳನ್ನು ಆ ತಟ್ಟೆಯಲ್ಲಿ ಇಟ್ಟುಕೊಳ್ಳಿ. ತಟ್ಟೆಯಲ್ಲಿ ದೀಪಗಳನ್ನು ಇಡುವ ಮುನ್ನ ಅದೇ ತಟ್ಟೆಯಲ್ಲಿ ಸ್ವಲ್ಪ ನೀರು, ಅರಿಶಿನ, ಕುಂಕುಮ ಮತ್ತು ಸುಣ್ಣವನ್ನು ಬೆರೆಸಿ ಕೆಂಪು ನೀರನ್ನು ಮಾಡಿಕೊಳ್ಳಿ. ಇದರಿಂದ ಪತಿಗೆ ಮೂರು ಬಾರಿ ದೃಷ್ಟಿ ತೆಗೆಯಿರಿ. ಹಾಗೂ ಪತಿಯ ಬಲ ಹುಬ್ಬಿನ ಮೇಲೆ ಕೆಂಪು ನೀರಿನ ತಿಲಕವನ್ನಿಡಿ ಮತ್ತು ಎರಡು ದೀಪದಲ್ಲಿ ಒಂದು ದೀಪವನ್ನು ಆರಿಸಿ, ಬತ್ತಿಯಲ್ಲಿರುವ ಕಪ್ಪನ್ನು ಹುಬ್ಬಿಗೆ ಇಡಿ. ನೀರನ್ನು ಹೊರಹಾಕಿ.
– ದೃಷ್ಟಿ ತೆಗೆದ ನಂತರ ಪತಿಗೆ ಸಿಹಿಯನ್ನು ತಿನ್ನಿಸಿ. ಸಾಧ್ಯವಾದರೆ ಪತಿ ತನ್ನ ಪತ್ನಿಗೆ ಉಡುಗೊರೆಯನ್ನೂ ನೀಡಬಹುದು.