ಭಾರತ ತಂಡ ಈಗ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಜುಲೈ 27ರಂದು 3 ಪಂದ್ಯಗಳ ಟಿ20 ಕ್ರಿಕೆಟ್ ಶುರುವಾಗಲಿದ್ದು ಈ ಮೂಲಕ ಭಾರತ ತಂಡದಲ್ಲಿ ಗೌತಮ್ ಗಂಭೀರ್ ತಮ್ಮ ಕೆಲಸ ಶುರು ಮಾಡಲಿದ್ದಾರೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ 3ನೇ ಆವೃತ್ತಿಯ ಫೈನಲ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಮುಂದಿರುವ ಬಹುದೊಡ್ಡ ಸವಾಲುಗಳಾಗಿವೆ.
ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಆಯ್ಕೆಯಾಗಿದ್ದು, ಈ ಬಗ್ಗೆ ಮಾಜಿ ಕೋಚ್ ರವಿ ಶಾಸ್ತ್ರಿ ಇದೀಗ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 2024ರ ಸಾಲಿನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಟ್ರೋಫಿ ಗೆದ್ದ ಬಳಿಕ ಮುಖ್ಯ ಕೋಚ್ ಸ್ಥಾನದಿಂದ ರಾಹುಲ್ ದ್ರಾವಿಡ್ ಕೆಳಗಿಳಿದರು. ಅವರ ಸ್ಥಾನಕ್ಕೆ ಗೌತಮ್ ಗಂಭೀರ್ ಸೂಕ್ತ ಆಯ್ಕೆ ಎಂದು ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಅಖಾಡದಲ್ಲಿ ಲಖನೌ ಸೂಪರ್ ಜಯಂಟ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳಲ್ಲಿ ಮೆಂಟರ್ ಆಗಿ ಕೆಲಸ ಮಾಡಿ ಯಶಸ್ಸು ಕಂಡ ಅನುಭವ ಹೊಂದಿರುವ ಗೌತಮ್ ಗಂಭೀರ್ ಅವರಿಂದ ಟೀಮ್ ಇಂಡಿಯಾಗೆ ಹೊಸ ಹೊಸ ಐಡಿಯಾಗಳು ಲಭ್ಯವಾಗಲಿದೆ ಎಂದು ರವಿ ಶಾಸ್ತ್ರಿ ಭವಿಷ್ಯ ನುಡಿದಿದ್ದಾರೆ. ಪ್ರಮುಖವಾಗಿ ವೈಟ್ಬಾಲ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಗಂಭೀರ್ ಮಾರ್ಗದರ್ಶನದಲ್ಲಿ ಯಶಸ್ಸು ಕಾಣಲಿದೆ ಎಂದಿದ್ದಾರೆ.
“ಗಂಭೀರ್ ಅವರಲ್ಲಿ ಆಧುನಿಕ ಯುಗದ ವೈಟ್ಬಾಲ್ ಕ್ರಿಕೆಟ್ ಆಡಿದ ಅಪಾರ ಅನುಭವ ಇದೆ. ಜೊತೆಗೆ ಇತ್ತೀಚೆಗೆ ಐಪಿಎಲ್ನಲ್ಲಿ ಯಶಸ್ಸು ಕಂಡಿದ್ದಾರೆ. ಕೋಚ್ ಆಗಲು ಅವರಿಗೆ ಇದು ಸೂಕ್ತ ಸಮಯ. ಸರಿಯಾದ ಸಮಯಕ್ಕೆ ಭಾರತ ತಂಡದ ಮುಖ್ಯ ಕೋಚ್ ಸ್ಥಾನದಲ್ಲಿದ್ದಾರೆ. ತಂಡಕ್ಕೆ ಹೊಸ ಐಡಿಯಾಗಳನ್ನು ಅವರು ಕೊಡಬಲ್ಲರು. ಒಂದು ಪ್ರಬುದ್ಧ ತಂಡಕ್ಕೆ ಅವರು ಕೋಚ್ ಆಗಿದ್ದಾರೆ,” ಎಂದು ಐಸಿಸಿಗೆ ನೀಡಿರುವ ಸಂದರ್ಶನದಲ್ಲಿ ರವಿ ಶಾಸ್ತ್ರಿ ಹೇಳಿದ್ದಾರೆ.