ತುಮಕೂರು:- ಆ್ಯಪ್ಗಳನ್ನ ನಂಬಿ ಹಣ ಹಾಕೋ ಮುನ್ನ ಹುಷಾರ್, ಹೆಚ್ಚು ಹಣ ಬರಲಿ ಅಂತ ಹೀಗೆ ಮಾಡಿದ್ರೆ ಕೋಟಿ-ಕೋಟಿ ದೋಖಾ ಮಾಡ್ತಾರೆ ಹುಷಾರ್. ಇದರ ಕಂಪ್ಲೀಟ್ ಡೀಟೈಲ್ಸ್ ತಿಳಿಯಲು ಈ ಸ್ಟೋರಿ ಪೂರ್ತಿ ಓದಿ.
ತುಮಕೂರು ಜಿಲ್ಲೆಯಲ್ಲಿ ಆನ್ಲೈನ್ ಟ್ರೇಡಿಂಗ್ ಮೂಲಕ ಕೋಟ್ಯಾಂತರ ರೂಪಾಯಿಯ ಮಹಾದೋಖಾ ಪ್ರಕರಣವೊಂದು ಬೆಳಕಿಗೆ ಬಂದಿದೆ.. DAAI’ ಎಂಬ ಆನ್ಲೈನ್ ಆ್ಯಪ್ ಹೆಸರಿನಲ್ಲಿ ಸುಮಾರು 5 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆಯಾಗಿರುವ ಬಗ್ಗೆ ಸಿಎಸ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಯಾವುದೇ ಅಧಿಕೃತ ಮಾಹಿತಿ ಇಲ್ಲದ DAAI ಆನ್ ಲೈನ್ ಆ್ಯಪ್ನ ಮೋಡಿಗೆ ಮರುಳಾದ ಯುವಕರು, ಮಹಿಳೆಯರು, ಪುರುಷರು, 7000 ದಿಂದ 5 ಲಕ್ಷದವರೆಗೂ ಹಣ ಹೂಡಿ ಇದೀಗ ಕಂಗಲಾಗಿದ್ದಾರೆ. ಆರಂಭದಲ್ಲಿ ಒಂದೆರೆಡು ತಿಂಗಳು ಅಸಲಿ ಹಣಕ್ಕೆ ಬಡ್ಡಿ ಹಾಕಿ ಬಳಿಕ ಗ್ರಾಮದಲ್ಲಿ ಕಾರ್ಯಕ್ರಮ ನಡೆಸಿ ಮತ್ತಷ್ಟು ಹಣ ಹಾಕುವಂತೆ ಆಸೆ ತೋರಿಸಿ ಇದೀಗ ಏಕಾಏಕಿ ಆ್ಯಪ್ ಬಂದ್ ಮಾಡುವ ಮೂಲಕ ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ.
ಮೊದಲು DAAI ಆ್ಯಪ್ನ ಇನ್ಸ್ಟಾಲ್ ಮಾಡಿಸಿ ಹಣ ವರ್ಗಾಯಿಸಲು ಆಪ್ಷನ್ ನೀಡಿ, ಹಣವನ್ನ ಆನ್ಲೈನ್ ಟ್ರಾನ್ಸಾಕ್ಷನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಆ್ಯಪ್ನಲ್ಲಿ 7 ಸಾವಿರದಿಂದ 5 ಲಕ್ಷದವರೆಗೂ ಹಣ ಹಾಕುವ ಆಪ್ಷನ್ ನೀಡಲಾಗಿದೆ. ಮೊದಮೊದಲು ಜನರು ಹಾಕಿದ ಹಣಕ್ಕೆ ದಿನಕ್ಕೆ 16% ಬಡ್ಡಿ ನೀಡಿದ್ದಾರೆ. ಆ್ಯಪ್ನಲ್ಲಿ ಹೂಡಿಕೆ ಮಾಡಿದ ಜನರ ಹಣವನ್ನ ತಮ್ಮ ಖಾತೆಗೆ ವಾಪಸ್ ವರ್ಗಾಯಿಸಿಕೊಳ್ಳಲು 25 ದಿನಗಳ ವ್ಯಾಲಿಡಿಟಿ ನೀಡಲಾಗಿದೆ. 25 ದಿನಗಳ ವರೆಗೂ ನೀಡುತ್ತಿದ್ದ ಬಡ್ಡಿಯನ್ನ ಕೂಡಲೇ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳಬಹುದಿತ್ತು. ಇದೇ ಬಡ್ಡಿಯ ಆಸೆಗೆ ಬಿದ್ದ ಜನರು ನಮ್ಮ ಹಣ ಮತ್ತಷ್ಟು ಹೆಚ್ಚಾಗಲಿ ಎಂದು ಆ್ಯಪ್ನಲ್ಲೇ ಹಣ ಬಿಟ್ಟು ಇದೀಗ ಅಸಲು ಇಲ್ಲ, ಬಡ್ಡಿಯೂ ಇಲ್ಲ ಎನ್ನುವಂತಾಗಿದೆ.
ರೈತರು, ವ್ಯವಸಾಯ ಮಾಡುವವರು, ಕೂಲಿ ಕಾರ್ಮಿಕರು, ಯುವಕರು, ಮಹಿಳೆಯರು ಹಣದಾಸೆಗೆ ಬಿದ್ದು ಮೋಸ ಹೋಗಿದ್ದಾರೆ. ಸದ್ಯ ಒಂದು ವಾರದಿಂದ ಆ್ಯಪ್ನ ಸಂಪೂರ್ಣ ವಹಿವಾಟು ನಿಂತಿದ್ದು, ಯಾವುದೇ ವಹಿವಾಟು ನಡೆಯದಂತೆ ಲಾಕ್ ಆಗಿದೆ. ತುಮಕೂರು, ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಈ ಆ್ಯಪ್ ಆಕ್ಟೀವ್ ಆಗಿರೋ ಬಗ್ಗೆ ಮಾಹಿತಿ ದೊರೆತಿದೆ. ಒಬ್ಬೊಬ್ಬರು 7 ಸಾವಿರದಿಂದ ಲಕ್ಷಗಟ್ಟಲೇ ಹಣವನ್ನ ಹಾಕಿ ದಿಕ್ಕು ತೋಚದಂತಾಗಿದ್ದಾರೆ