ಹುಬ್ಬಳ್ಳಿ: ಇಂದು ಹುಬ್ಬಳ್ಳಿಯ ಗಬ್ಬೂರಿನಲ್ಲಿರುವ ಧಾರವಾಡ (ಪೂರ್ವ) ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ರೋಡ್ ಸೇಫ್ಟಿ ಹಾರ್ನೆಸ್ ಸ್ಕೀಮ್ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಭೀಮನಗೌಡ ಪಾಟೀಲ್ ಅವರು, ಕೇಂದ್ರ ಸರ್ಕಾರವು ಕೇಂದ್ರ ಮೋಟಾರು ವಾಹನ ನಿಯಮಾವಳಿ-1989 ರ ನಿಯಮ-138 ರ ಅಡಿಯಲ್ಲಿ ಉಪ ನಿಯಮ(7)ನ್ನು ಜಾರಿಗೆ ತಂದಿದ್ದು, ಇದರನ್ವಯ 9 ತಿಂಗಳಿನಿಂದ 04 ವರ್ಷಗಳ ಒಳಗಿನ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುವಾಗ ನಿಗದಿಪಡಿಸಲಾಗಿರುವ ರಕ್ಷಣಾ (ಸೇಫ್ಟಿ) ಸಾಧನಗಳನ್ನು ಅಳವಡಿಸಿಕೊಂಡು ಕರೆದೊಯ್ಯುವುದನ್ನು ಕಡ್ಡಾಯಗೊಳಿಸಿದೆ ಎಂದರು.
ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿರುವ ದ್ವಿಚಕ್ರ ವಾಹನಗಳ ಡೀಲರ್ಗಳು ದ್ವಿಚಕ್ರ ವಾಹನಗಳ ಖರೀದಿದಾರರಿಗೆ (ಗ್ರಾಹಕರಿಗೆ) ವಾಹನಗಳನ್ನು ವಿತರಿಸುವ ಪೂರ್ವದಲ್ಲಿ ಇಂತಹ ಸಾಧನಗಳನ್ನು ಕಡ್ಡಾಯವಾಗಿ ಒದಗಿಸುವಂತೆ ಮತ್ತು ಹೆಲ್ಮೇಟುಗಳನ್ನು ಕಡ್ಡಾಯವಾಗಿ ನೀಡುವಂತೆ ಸೂಚನೆಗಳನ್ನು ನೀಡಲಾಯಿತು. ಈ ಕುರಿತು ಪ್ರತಿಯೊಂದು ಡೀಲರ್ಗಳು ತಮ್ಮ ಶೋರೂಂಗಳಲ್ಲಿ ಬ್ಯಾನರ್ ಪ್ರದರ್ಶಿಸಿ, ಅಗತ್ಯ ಮಾಹಿತಿಯನ್ನು ನೀಡುವುದರೊಂದಿಗೆ ಈ ಕುರಿತು ಜಾಗೃತಿ ಮೂಡಿಸುವಂತೆ ಸೂಚಿಸಲಾಯಿತು.
ಸಭೆಯಲ್ಲಿ ರಕ್ಷಣಾ ಸಾಧನಗಳನ್ನು ಪ್ರದರ್ಶಿಸಲಾಯಿತು.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಕೆ.ದಾಮೋದರ, ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಎಸ್.ಡಿ. ಬೆಲ್ಲದ, ವಿನಾಯಕ ನಾಯಕ, ಕಚೇರಿ ಅಧೀಕ್ಷಕರಾದ ನಿಂಗಪ್ಪ ಬಿಳ್ಳೂರ ಸೇರಿದಂತೆ ಇತರರು ಭಾಗವಹಿಸಿದ್ದರು.
ಸಾರಿಗೆ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ಜಿ.ವಿ.ದಿನಮಣಿ ಅವರು ಕಾರ್ಯಕ್ರಮ ನಿರೂಪಿಸಿ, ನಿರ್ವಹಿಸಿದರು.