ಬೆಂಗಳೂರು : ಕಾವೇರಿ ನೀರಿನ ದರ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಮಳೆಗಾಲದ ಅಧಿವೇಶನದ ಬಳಿಕ ಕಾವೇರಿ ನೀರಿನ ದರ ಹೆಚ್ಚಳ ಮಾಡುವ ಕುರಿತು ಸಭೆ ನಡೆಸಿ ನಿರ್ಧರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಳೆದ 12 ವರ್ಷಗಳಿಂದ ಕಾವೇರಿ ನೀರಿನ ದರ ಹೆಚ್ಚಿಸಿಲ್ಲ ಹಾಗಾಗಿ ಜಲ ಮಂಡಳಿ ಆರ್ಥಿಕ ನಷ್ಟ ಎದುರಿಸುತ್ತಿದೆ. ಕಾವೇರಿ ನೀರಿದ ದರ ಹೆಚ್ಚಳ ಮಾಡಿದ್ರೆ ವಿಪಕ್ಷಗಳು ವಿರೋಧಿಸುತ್ತಾರೆ, ಆದ್ರೆ ದರ ಹೆಚ್ಚಿಸದೆ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಜಲಮಂಡಳಿ ಸತ್ತು ಹೋಗಲಿದೆ ಎಂದರು.
ಕಾವೇರಿ ನೀರಿನ ದರ ಹೆಚ್ಚಳದ ಕುರಿತು ಅಧಿವೇಶನದ ಬಳಿಕ ಸಭೆ ನಡೆಸಿ ದರ ಏರಿಕೆ ಕುರಿತು ನಿರ್ಧರಿಸಲಾಗುವುದು, ಕಾವೇರಿ ನೀರಿನ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಇಲ್ಲವಾದರೆ ಜಲಮಂಡಳಿ ನಷ್ಟದಲ್ಲಿ ಮುಳುಗಿಹೋಗಲಿದೆ. ಬೆಂಗಳೂರು ನಗರದಲ್ಲಿರುವ ಎಲ್ಲಾ ಕೆರೆಗಳನ್ನು ವಶಕ್ಕೆ ಪಡೆಯುತ್ತೇವೆ, ಆ ಮೂಲಕ ಅಂತರ್ಜಲ ಹೆಚ್ಚಿಸುವ ಯೋಜನೆ ತರಲಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.
ಗೃಹ ಬಳಕೆ ನೀರಿನ ಮೇಲೆ ಶೇ.30 ರಿಂದ 40, ವಾಣಿಜ್ಯ ಬಳಕೆ ಶೇ.45ರಷ್ಟು ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಸದ್ಯ ಜಲಮಂಡಳಿ ಅಧಿಕಾರಿಗಳು ಸಲ್ಲಿಕೆ ಮಾಡಿರುವ ವರದಿಯಲ್ಲಿನ ಅಂಶಗಳನ್ನು ಬಿಟ್ಟುಕೊಡದೆ ಗೌಪ್ಯವಾಗಿಟ್ಟಿದ್ದಾರೆ. ಹೀಗಾಗಿ ಎಲ್ಲರ ಚಿತ್ತ ನಗರಾಭಿವೃದ್ದಿ ಇಲಾಖೆಯ ನಿರ್ಧಾರದತ್ತ ಮೂಡಿದೆ.