ಹುಬ್ಬಳ್ಳಿ: ಬಜೆಟ್ ಮಂಡಿಸಿದ ನಿರ್ಮಲಾ ಸಿತಾರಾಮನ್ ಅವರು, ಕೇವಲ ಬಿಹಾರ್ ಮತ್ತು ಆಂದ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡಿ ಇನ್ನುಳಿದ ರಾಜ್ಯಗಳಿಗೆ ಅನ್ಯಾಯ ಮಾಡಿದ್ದಾರೆ. ಅಲ್ಲದೆ ನಮ್ಮ ರಾಜ್ಯಕ್ಕೆ ಚೊಂಬು ನೀಡಿದ್ದಾರೆ ಇದೊಂದು ಕೇಂದ್ರ ಸರ್ಕಾರದ ತಾರತಮ್ಯದ ಬಜೆಟ್ ಎಂದು ಪೂರ್ವ ಕ್ಷೇತ್ರದ ಶಾಸಕರು, ಸ್ಲಮ್ ಬೋರ್ಡ್ ಅಧ್ಯಕ್ಷರಾದ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.
ಅವರು, ಮಂಗಳವಾರ ಮಂಡನೆಯಾದ ಕೇಂದ್ರ ಬಜೆಟ್ ಕುರಿತು ಪ್ರಕಟಣೆ ನೀಡಿ, ನಿತೀಶ ಕುಮಾರ್ ಮತ್ತು ಚಂದ್ರಬಾಬು ಅವರ ಋಣದಲ್ಲಿ ಬಿಜೆಪಿ ಇದ್ದು ಹೀಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇದು ಕೆಲವೇ ರಾಜ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್ ಆಗಿದೆ ಹೊರತು, ಸಮಗ್ರ ದೇಶದ್ದಲ್ಲ ಎಂದು ಶಾಸಕ ಪ್ರಸಾದಅಬ್ಬಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಸಚಿವೆ ನಿರ್ಮಲಾ ಸೀತಾರಾಮನ್ ಅವರು, ರಾಜ್ಯಸಭೆಯಲ್ಲಿ ತಾವು ಪ್ರತಿನಿಧಿಸುವ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ . ಯುವಕರ ಆರ್ಥಿಕ ಪುನಶ್ವೇತನದ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ, ಉದ್ಯೋಗ ಸೃಷ್ಟಿಯಿಲ್ಲ. ಬಹು ನಿರೀಕ್ಷಿತ ರೈತರ ಕನಿಷ್ಠ ಬೆಂಬಲ ಬೆಲೆ ಎಂ.ಎಸ್.ಪಿ ಗ್ಯಾರಂಟಿ ಕಾಯ್ದೆ ಜಾರಿ ಬಗ್ಗೆ ಚಕಾರವಿಲ್ಲ. ಆರೋಗ್ಯ, ಸಮಗ್ರ ಕೈಗಾರಿಕಾ ವಲಯ, ಉತ್ಪಾದನಾ ಕ್ಷೇತ್ರದ ಬಗ್ಗೆ ಗಮನ ಹರಿಸಿಲ್ಲ. ಅದರಲ್ಲೂ ವಿಶೇಷವಾಗಿ ಕರ್ನಾಟಕಕ್ಕೆ ಕೊಡುಗೆ ಇಲ್ಲ. ಹೀಗಾಗಿ ಇದೊಂದು ಸೀಮಿತ ಮತ್ತು ತಾರತಮ್ಯದ ಬಜೆಟ್ ಆಗಿದೆ.
ಇನ್ನು ಬೆಲೆ ಏರಿಕೆಗೆ ನಿಯಂತ್ರಣ ಹಾಕದೆ ಪೆಟ್ರೋಲ್, ಡೀಸೆಲ್, ಅಡುಗೆ ತೈಲ, ಬೇಳೆಕಾಳುಗಳು, ಎಣ್ಣೆ ಬೀಜಗಳು ಸೇರಿದಂತೆ ಅಗತ್ಯ ವಸ್ತುಗಳ ದರ ಇಳಿಕೆ ಮಾಡುವಲ್ಲಿ ಕೇಂದ್ರದ ಬಿಜೆಪಿ ಸಂಪೂರ್ಣ ಎಡವಿದೆ ಎಂದು ಅವರು ತಿಳಿಸಿದ್ದಾರೆ.