ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಆಗಿರುವ ಪವನ್ ಕಲ್ಯಾಣ್ ಗೆ ಜೀವ ಬೆದರಿಕೆ ಸಂದೇಶ ಬಂದಿದೆ.
ಅವರ ಪ್ರಾಣಕ್ಕೆ ಅಪಾಯ ಇದೆ ಎಂಬ ಮಾಹಿತಿ ಹರಿದಾಡುತ್ತಿದೆ. ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಪವನ್ ಕಲ್ಯಾಣ್ ಅವರಿಗೆ ಮಾಹಿತಿ ರವಾನಿಸಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಕೇಳಿ ಪವನ್ ಕಲ್ಯಾಣ್ ಅವರ ಅಭಿಮಾನಿಗಳಿಗೆ ಆತಂಕ ಆಗಿದೆ.
ಜನಸೇನಾ ಪಕ್ಷದ ಮೂಲಕ ಪವನ್ ಕಲ್ಯಾಣ್ ಅವರಿಗೆ ಈ ವರ್ಷ ದೊಡ್ಡ ಗೆಲುವು ಸಿಕ್ಕಿತು. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಜನಸೇನಾ ಪಕ್ಷ ಜಯಭೇರಿ ಬಾರಿಸಿತು. ಸಿನಿಮಾರಂಗದಲ್ಲೂ ಪವನ್ ಕಲ್ಯಾಣ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇದೆಲ್ಲದರ ನಡುವೆ ಅವರ ಹತ್ಯೆಗೆ ಕೆಲವರು ಸ್ಕೆಚ್ ಹಾಕುತ್ತಿದ್ದಾರೆ ಎಂಬುದು ಆತಂಕಕಾರಿ ವಿಷಯ. ಈ ಬಗ್ಗೆ ಪವನ್ ಕಲ್ಯಾಣ್ ಅವರು ಗಮನ ಹರಿಸುವ ಅಗತ್ಯ ಇದೆ.
ಕಿಡಿಗೇಡಿಗಳು ಪವನ್ ಕಲ್ಯಾಣ್ ಅವರ ಹತ್ಯೆಗೆ ಸಂಚು ರೂಪಿಸುತ್ತಿರುವ ಕಾರಣದಿಂದ ಪೊಲೀಸರು ಭದ್ರತೆ ಹೆಚ್ಚಿಸಬೇಕು ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಈ ಮಾಹಿತಿಯನ್ನು ಜನಸೇನಾ ಪಕ್ಷದ ಮೂಲಗಳು ಖಚಿತಪಡಿಸಿವೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಅಷ್ಟಕ್ಕೂ ಪವನ್ ಕಲ್ಯಾಣ್ ಅವರನ್ನು ಮುಗಿಸಲು ಯತ್ನಿಸುತ್ತಿರುವವರು ಯಾರು ಎಂಬುದು ಸದ್ಯಕ್ಕೆ ಬಹಿರಂಗ ಆಗಿಲ್ಲ.
ತಮ್ಮ ಪ್ರಾಣಕ್ಕೆ ಅಪಾಯ ಇರುವ ಬಗ್ಗೆ ಈ ಮೊದಲು ಸ್ವತಃ ಪವನ್ ಕಲ್ಯಾಣ್ ಅವರು ಹೇಳಿದ್ದರು. ಈಗ ಗುಪ್ತಚರ ಇಲಾಖೆಗೂ ಈ ಬಗ್ಗೆ ಮಾಹಿತಿ ಸಿಕ್ಕಿರುವುದರಿಂದ ಪವನ್ ಕಲ್ಯಾಣ್ ಅವರಿಗೆ ಝಡ್ ಪ್ಲಸ್ ಸೆಕ್ಯೂರಿಟಿ ನೀಡಬೇಕು ಎಂದು ಜನಸೇನಾ ಪಕ್ಷದವರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.