ಬೆಂಗಳೂರು: ಮಳೆ ಹಾನಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಭೇಟಿ ನೀಡಿದರೆ ಸಾಲದು. ಬದಲಾಗಿ ಅವರು ಸೇನೆಯನ್ನು ಅಲ್ಲಿಗೆ ಕರೆಸಿಕೊಳ್ಳಬೇಕಿತ್ತು ಎಂದು ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾಡಿನಾದ್ಯಂತ ಚೆನ್ನಾಗಿ ಮಳೆ ಬೀಳ್ತಿದೆ. ಕಾವೇರಿ ವಿಚಾರದಲ್ಲಿ ಸುಪ್ರಿಂ ಆದೇಶ ಪಾಲಿಸುವ ಲಕ್ಷಣಗಳು ಕಾಣುತ್ತಿದೆ. ಮುಂಜಾಗ್ರತೆಯಾಗಿ ಕಾವೇರಿ ನದಿ ಪಾತ್ರದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ನಿಷೇಧ ಮಾಡಿದ್ದೇವೆ ಎಂದರು.
ಮಳೆಯಿಂದಾಗಿ ಕಾರವಾರದಲ್ಲಿ ಕಾರ್ಯಾಚರಣೆಗೆ ಸ್ವಲ್ಪ ತೊಂದರೆ ಆಗ್ತಿದೆ. ನೀರಿನಲ್ಲಿ ಕೊಚ್ಚಿ ಹೋಗಿದ್ದ ಟ್ಯಾಂಕರ್ ನ ಡ್ರೈವರ್ ಲಾರಿಯಲ್ಲೇ ಸಿಕ್ಕಿಹಾಕಿಕೊಂಡಿದ್ದಾನೆ. ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕರು ಹೋಗಿ ಕೆಲಸ ಮಾಡ್ತಿದ್ದಾರೆ ಎಂದು ವಿವರಿಸಿದರು.
ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅಂಕೋಲ ಭೇಟಿ ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಎಲ್ರೀ ಫೀಲ್ಡಿಗಿಳಿದಿದ್ದಾರೆ? ಅವರು ಸೈನಿಕರನ್ನು ಕರೆತಂದು ಫೀಲ್ಡಿಗಿಳಿಯಬೇಕಿತ್ತು. ಸುಮ್ನೆ ಹೋಗಿ ಒಂದು ವಿಸಿಟ್ ಮಾಡುವುದಲ್ಲ. ನಾವು ಒಂದೇ ಘಂಟೆಯಲ್ಲಿ ನಮ್ಮ ಮಿನಿಸ್ಟರ್ನ ಕ್ಯಾಬಿನೆಟ್ನಿಂದ ಅಲ್ಲಿಗೆ ಕಳಿಸಿದ್ದೇವೆ ಎಂದರು.