ಹುಬ್ಬಳ್ಳಿ: ವಾಲ್ಮೀಕಿ ಹಗರಣ ಹೊರಗಡೆ ಬರುತ್ತಿದೆ. ಆದರೂ ಸಿದ್ದರಾಮಯ್ಯ ಏನೂ ಅಗಿಲ್ಲ ಎನ್ನುತ್ತಿದ್ದರು. ಈಗ ಆಗಿದೆ ಎನ್ನುತ್ತಿದ್ದಾರೆ. ಒಟ್ಟಾರೆ ಭಂಡತನಕ್ಕೆ ಮತ್ತೊಂದು ಹೆಸರು ಸಿದ್ದರಾಮಯ್ಯ ಎಂದು ಸಂಸದ ಜಗದೀಶ ಶೆಟ್ಟರ್ ಕಿಡಿಯಾದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ನಾಗೇಂದ್ರ ಅವರು ಮಾಡಿರುವ ಭ್ರಷ್ಟಾಚಾರದ ದಾಖಲೆಗಳು ಒಂದೊಂದಾಗಿ ಹೊರಗೆ ಬರುತ್ತಿವೆ.
ಮುಡಾದಲ್ಲಿ ಪತ್ನಿ ಹೆಸರಿನಲ್ಲಿ ಬೇರೆ ಜಾಗ ತೆಗೆದುಕೊಂಡಿದ್ದಾರೆ. ಇವಿನ್ನೂ ಅಧಿವೇಶನದಲ್ಲಿ ಚರ್ಚೆಗೆ ಬಂದಿಲ್ಲ. ಇದರ ಮಧ್ಯೆ ಹಿಂದಿನ ಸರ್ಕಾರದ ಹಗರಣಗಳ ಹೊರಗೆ ಬರಲಿವೆ ಎಂದು ಪ್ರತಿಪಕ್ಷವನ್ನು ಹೆದರಿಸುತ್ತಿದ್ದಾರೆ. ಹಿಂದಿನ ಸರ್ಕಾರದಲ್ಲಿ ಹಗರಣ ಆಗಿದ್ದರೆ ನಿಮ್ಮ ಸರ್ಕಾರ ಬಂದು ವರ್ಷವಾಯಿತು. ತನಿಖೆಗೆ ಒಪ್ಪಿಸಲಿಲ್ಲ ಏಕೆ? ಎಂದು ಶೆಟ್ಟರ್ ಪ್ರಶ್ನಿಸಿದರು.
ಹಿಂದಿನ ಸರ್ಕಾರದ ಹಗರಣ ಬಿಡುತ್ತೇವೆ ಎನ್ನುವುದು ಒಳ್ಳೆಯದಲ್ಲ. ಈಗ ಆಗಿರುವ ಹಗರಣ ಕುರಿತು ಎಸ್ಐಟಿ, ನಿವೃತ್ತ ನ್ಯಾಯಾಧೀಶರು ಅಥವಾ ಸಿಬಿಐಗೆ ಒಪ್ಪಿಸುವ ಧೈರ್ಯ ಇದೆಯೇ? ಎಂದರು. ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣ ಹೊರಗಡೆ ತಂದಿದ್ದು ನಾನು. ಆಗ ಕೆಂಪಣ್ಣ ಆಯೋಗದಿಂದ ತನಿಖೆ ಮಾಡಿಸಲಾಯಿತು. ವರದಿ ಕೊಟ್ಟಿದ್ದರೂ ಅದನ್ನು ಸಿದ್ದರಾಮಯ್ಯ ಮುಚ್ಚಿಟ್ಟರು.
ವರದಿ ಕೊಟ್ಟ ನಂತರ ಸದನದಲ್ಲಿ ಮಂಡನೆ ಮಾಡಬೇಕು. ಇದಕ್ಕೂ ಮೊದಲೇ ನಾನು ನಿರಪರಾಧಿ ಎಂದು ಹೇಳುತ್ತಿದ್ದಾರೆ. ನೀವು ನಿರಪರಾಧಿ ಆಗಿದ್ದರೆ ಅರ್ಕಾವತಿ ವರದಿ ಮಂಡನೆ ಮಾಡಿ. ನೀವು ಮಾಡದೇ ಇದ್ದರೆ ತಪ್ಪಿತಸ್ಥರು ಎಂದಾಗುತ್ತದೆ. ವಿತಂಡ ವಾದ ಮಾಡಬಾರದು. ಇವೆಲ್ಲ ಪ್ರಕರಣ ಡೈವರ್ಟ್ ಮಾಡಲು ಕನ್ನಡಿಗರಿಗೆ ಮೀಸಲು ವಿಷಯ ಮುನ್ನೆಲೆಗೆ ಬಿಟ್ಟಿದ್ದಾರೆ. ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಛೇಡಿಸಿದರು.