ಬಾಗಲಕೋಟೆ: ಮಹಾರಾಷ್ಟ್ರದ ಪಶ್ಚಿಮಘಟ್ಟಗಳಲ್ಲಿ ವರುಣನ ಅರ್ಭಟ ಮುಂದುವರೆದಿದ್ದು, ಕೊಯ್ನಾ, ನವಜಾ, ಮಹಾಬಳೇಶ್ವರ, ರಾಧಾನಗರಿ, ಧೂದಗಂಗಾ, ಪಾಟಗಾಂವ ಸೇರಿದಂತೆ ನಾನಾ ಕಡೆ ಭಾರಿ ಮಳೆಯಾಗುತ್ತಿದೆ. ಹೀಗಾಗಿ ಕೃಷ್ಣಾ ನದಿಗೆ ಅಪಾರ ನೀರು ಹರಿದು ಬರುತ್ತಿದೆ. ರಾಜಾಪುರ ಬ್ಯಾರೇಜ್ ಹಾಗೂ ಕಲ್ಲೋಳ ಬ್ಯಾರೇಜ್ನಿಂದ ಅಪಾರ ನೀರನ್ನು ಕೃಷ್ಣಾ ನದಿಗೆ ಹರಿಸುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಅಧಿಕವಾಗಿದೆ.
ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗುತ್ತಿದ್ದರಿಂದ ಮುಂಜಾಗ್ರತೆ ಕ್ರಮವಾಗಿ ಜಲಾಶಯದಿಂದ ನದಿ ಪಾತ್ರಕ್ಕೆ ನೀರು ಹರಿಬಿಡಲಾಗುತ್ತಿದೆ. ಸದ್ಯಕ್ಕೆ ಪ್ರವಾಹ ಭೀತಿ ಇಲ್ಲ. ಆದರೂ ನದಿ ತೀರಕ್ಕೆ ಜನ ಜಾನುವಾರು ಸುಳಿಯದಂತೆ ಜನರಲ್ಲಿಜಾಗೃತಿ ಮೂಡಿಸಲಾಗುತ್ತಿದೆ. ಡಂಗೂರ ಸಾರುವುದು ಹಾಗೂ ಧ್ವನಿವರ್ಧಕ ಮೂಲಕ ಜನರನ್ನು ಎಚ್ಚರಿಸಲಾಗುತ್ತಿದೆ. ಮುಂಜಾಗ್ರತೆ ಕ್ರಮವಾಗಿ ತಾಲೂಕು ಮಟ್ಟದ ಮೂವರು ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ,” ಎಂದು ತಹಸೀಲ್ದಾರ್ ಅಮರಾವದಗಿ ತಿಳಿಸಿದರು.
ಜಲಾಶಯದಲ್ಲಿ ಎಷ್ಟಿದೆ ನೀರು?
ಜಲಾಶಯದ ಗರಿಷ್ಠ ನೀರಿನ ಮಟ್ಟ : 123.081 ಟಿಎಂಸಿ.ಇಂದಿನ ಜಲಾಶಯದಲ್ಲಿನ ನೀರಿನ ಮಟ್ಟ : 97.416 ಟಿಎಂಸಿ.
ಜಲಾಶಯದ ಒಟ್ಟು ಎತ್ತರ : 519.60 ಮೀ.ಇಂದಿನ ಜಲಾಶಯದಲ್ಲಿನ ನೀರಿನ ಪ್ರಮಾಣ : 517.98 ಮೀ.ಇಂದಿನ ನೀರಿನ ಒಳಹರಿವು : 43,478 ಕ್ಯೂಸೆಕ್.ಇಂದಿನ ನೀರಿನ ಹೊರಹರಿವು : 65,480 ಕ್ಯೂಸೆಕ್.