ತುಮಕೂರು: ಹೆಂಡತಿ ಪರ ಪುರುಷನೊಂದಿಗೆ ಓಡಿಹೋದಳು ಎಂದು ಮರ್ಯಾದೆಗೆ ಅಂಜಿ ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ತಾಲೂಕಿನ ಹೊಸಹಳ್ಳಿ ಎಂಬಲ್ಲಿ ನಡೆದಿದೆ. ದೇವರಾಜ್ ಆತ್ಮಹತ್ಯೆಗೆ ಶರಣಾದವರಾಗಿದ್ದು, ದೇವರಾಜ್ ಹಾಗೂ ಮಾಧವಿ ಇಬ್ಬರು ಪ್ರೀತಿಸಿ 18 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಪರ ಪುರುಷನ ಮೇಲೆ ವ್ಯಾಮೋಹಕ್ಕೆ ಸಿಲುಕಿದ ಮಾಧವಿ, ಹೊಸಹಳ್ಳಿ ಗ್ರಾಮದ ಆನಂದ್ ಕುಮಾರ್ ಎಂಬಾತನೊಟ್ಟಿಗೆ ಪರಾರಿ ಆಗಿದ್ದಾಳೆ.
ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್ನಲ್ಲಿ ಪ್ರಧಾನಿ ಮೋದಿ, ಕುಮಾರಸ್ವಾಮಿ, ಡಿಸಿ-ಎಸ್ಪಿಗೆ ನನ್ನ ಸಾವಿಗೆ ನ್ಯಾಯಕೊಡಿಸಿ ಎಂದು ದೇವರಾಜ್ ಮನವಿ ಮಾಡಿದ್ದಾರೆ. ಪ್ರೀತಿಸಿ ಮದುವೆಯಾಗಿ 18 ವರ್ಷಗಳ ಬಳಿಕ ಪತ್ನಿ ಮತ್ತೊಬ್ಬನ ಜೊತೆ ಸಂಬಂಧ ಹೊಂದಿದ್ದಳು. ಈ ವಿಷಯ ತಿಳಿದು ಹಲವು ಬಾರಿ ದೇವರಾಜ್ ಮನನೊಂದಿದ್ದರು.
ಪ್ರೀತಿಸಿ ಮದುವೆಯಾದರೂ ಪರ ಪುರುಷನ ಮೇಲೆ ಪತ್ನಿಗೆ ವ್ಯಾಮೋಹ ಹೆಚ್ಚಾಗಿತ್ತು. ಮಕ್ಕಳು ಹಾಗು ತನ್ನನ್ನು ಬಿಟ್ಟು ಪರಾರಿಯಾದ ಪತ್ನಿ ನಡತೆಯಿಂದ ತೀವ್ರ ಆತಂಕಕ್ಕೊಳಗಾಗಿದ್ದರು. ಅಷ್ಟೇ ಅಲ್ಲದೇ, ಇಬ್ಬರು ಹೆಣ್ಣು ಮಕ್ಕಳೂ ತಬ್ಬಲಿಯಾಗಿದ್ದಾರೆ ಎಂಬ ಕೊರಗು ಕಾಡುತ್ತಿತ್ತು.
ದೇವರಾಜ್ ಹೊಸಹಳ್ಳಿಯಲ್ಲಿ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. 16 ಹಾಗೂ 12 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪ್ರತಿನಿತ್ಯ ಅಂಗಡಿ ಬಳಿ ಬರುತ್ತಿದ್ದ ಆನಂದ್ ಕುಮಾರ್, ಪತ್ನಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದನು. ಮೂರು ತಿಂಗಳ ಹಿಂದೆ ಪತಿ, ಮನೆ, ಮಕ್ಕಳನ್ನು ಬಿಟ್ಟು ಆನಂದ್ ಜೊತೆ ಹೋಗಿದ್ದಾಳೆ.
ಬಳಿಕ ವಾಪಸ್ ಬಂದಿರಲಿಲ್ಲ. ಇದರಿಂದ ನೊಂದು ದೇವರಾಜ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪತಿ, ಪತ್ನಿ ಇಬ್ಬರ ಮೇಲೂ ಪ್ರಕರಣ ದಾಖಲಾಗಿದೆ.