ಉತ್ತರ ಪ್ರದೇಶ: ಅಪ್ರಾಪ್ತ ವಯಸ್ಕನೊಬ್ಬನಿಗೆ ಒತ್ತಾಯದಿಂದ ಮೂತ್ರ ಕುಡಿಸಿದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯಲ್ಲಿ ನಡೆದಿದೆ. ಮೂತ್ರ ಕುಡಿದ ಬಾಲಕನ ಸಹೋದರ ಪೊಲೀಸರಿಗೆ ನೀಡಿದ ದೂರಿನಲ್ಲಿ, ಮೂವರು ಆರೋಪಿಗಳು ಆಲ್ಕೋಹಾಲ್ ಬಾಟಲಿಯಲ್ಲಿ ತಮ್ಮ ಮೂತ್ರ ತುಂಬಿಸಿ ಅದನ್ನು ತನ್ನ ತಮ್ಮನಿಗೆ ಬಲವಂತವಾಗಿ ಕುಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸರ ಪ್ರಕಾರ, ಬಂಧಿತರಾಗಿರುವ ಮೂವರು ಆರೋಪಿಗಳನ್ನು ಭೂರೆ ತಿವಾರಿ, ದಿಲೀಪ್ ಮಿಶ್ರಾ ಮತ್ತು ಸತ್ಯಂ ತಿವಾರಿ ಎಂದು ಗುರುತಿಸಲಾಗಿದೆ. ಮೂವರೂ ಉತ್ತರ ಪ್ರದೇಶದ ರಾಂಪುರ ತ್ರಿಭೌನಾ ಗ್ರಾಮದ ನಿವಾಸಿಗಳು. ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ದೌರ್ಜನ್ಯಕ್ಕೊಳಗಾದ ಬಾಲಕನ ಸಹೋದರ ಜುಲೈ 1ರಂದು ದೂರು ದಾಖಲಿಸಿದ್ದಾರೆ. ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಭೂರೆ ತಿವಾರಿ ಆ ಬಾಲಕನನ್ನು ವಾಹನದಲ್ಲಿ ಡಿಜೆ ಹಾಕಲು ಕೇಳಿದ್ದರು. ಅದರೊಂದಿಗೆ ಜನರೇಟರ್ ಅನ್ನು ಲೋಡ್ ಮಾಡಲು ಸಹ ಅವರು ಹೇಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ, ಅದಕ್ಕೆ ಆ ಬಾಲಕ ನಿರಾಕರಿಸಿದಾಗ, ಇತರ ಇಬ್ಬರು ಆರೋಪಿಗಳಾದ ಮಿಶ್ರಾ ಮತ್ತು ಸತ್ಯಂ ತಿವಾರಿ,
ಜೊತೆ ಸೇರಿ ಆ ಬಾಲಕನಿಂದ ಈ ಕೆಲಸ ಮಾಡಿಸಲು ಒತ್ತಾಯಿಸಿದ್ದಾರೆ. ಇದೇ ವೇಳೆ ಮತ್ತೋರ್ವ ಆರೋಪಿ ದಿಲೀಪ್ ಮದ್ಯದ ಬಾಟಲಿಯಲ್ಲಿ ತನ್ನ ಮೂತ್ರ ತುಂಬಿ ಬಾಲಕನಿಗೆ ಬಲವಂತವಾಗಿ ಕುಡಿಸಿದ್ದಾನೆ. ಇದಕ್ಕೆ ಆ ಬಾಲಕ ಪ್ರತಿಭಟಿಸಿದಾಗ ಆರೋಪಿಗಳು ಆತನನ್ನು ಥಳಿಸಿದ್ದಾರೆ. ಅವನತ್ತ ಕಂಟ್ರಿ ನಿರ್ಮಿತ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.