ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರದ್ದುಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ”ಮುಡಾದಲ್ಲಿ ಇರುವ ಜನಪ್ರತಿನಿಧಿಗಳು,
ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರದ್ದು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ಕೊಟ್ಟಿದ್ದೇನೆ. ಹೆಚ್ಚು ಜನರನ್ನು ನೇಮಕ ಮಾಡಿಕೊಳ್ಳುವ ಬದಲು ಮೂವರ ಸಮಿತಿಯಷ್ಟೇ ಇರಲಿ ಎಂದಿದ್ದೇನೆ. ಇದಕ್ಕೆ ಮುಖ್ಯಮಂತ್ರಿಗಳು ಕೂಡ ಪೂರಕವಾಗಿ ಸ್ಪಂದಿಸಿದ್ದಾರೆ,” ಎಂದು ಮಾಹಿತಿ ನೀಡಿದರು.
”ಮುಡಾ ಹಗರಣದ ಬಗ್ಗೆ ಮಾಹಿತಿ ಸಿಕ್ಕಿದೆ. ಸಿಎಂ ಅವರ ಭಾಮೈದ ಮಲ್ಲಿಕಾರ್ಜುನ 2004ರಲ್ಲಿ ಜಮೀನನ್ನು ಖರೀದಿಸಿ 2010ರಲ್ಲಿ ತಮ್ಮ ತಂಗಿ ಪಾರ್ವತಿ ಅವರಿಗೆ ದಾನವಾಗಿ ನೀಡಿದ್ದಾರೆ. 1985ರಲ್ಲಿ ಜವರ ಎಂಬುವವರು 100 ರೂ. ಕೊಟ್ಟು ಆ ಜಮೀನು ಖರೀದಿಸಿದ್ದರು. ಅಲ್ಲಿಗೆ ಅದು ದಲಿತ ಸಮುದಾಯಕ್ಕೆ ನೀಡಿದ ‘ಗ್ರ್ಯಾಂಟ್ ಲ್ಯಾಂಡ್’ ಅಲ್ಲ. ಕಾನೂನಾತ್ಮಕವಾಗಿ ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ನಿವೇಶನ ಹಂಚಲಾಗಿದೆ,” ಎಂದು ಸಮರ್ಥಿಸಿಕೊಂಡರು.