ಮಂಡ್ಯ: ಮರಳೇಕಾಯಿ ತಿಂದು 8 ಮಂದಿ ಮಕ್ಕಳು ಅಸ್ವಸ್ಥರಾದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಉಪ್ಪಾರದೊಡ್ಡಿ ಗ್ರಾಮದಲ್ಲಿ ನಡೆದಿದೆ. ಸೃಜನ್ (11), ಜ್ಞಾನವಿ (09) , ಸಿಂಚನ (05), ಆಷಿಕಾ (06), ಭುವನೇಶ್ವರಿ (07), ಚರಣ (09), ಧ್ರುವಚರಣ್ (09), ಚಂದ್ರ (07) ಅಸ್ವಸ್ಥಗೊಂಡ ಮಕ್ಕಳಾಗಿದ್ದು, ಮನೆಯೊಂದರ ಹಿಂದೆ ಬೆಳೆದಿದ್ದ ಮರಳೇಕಾಯಿ ಗಿಡದಲ್ಲಿ ಬಿಟ್ಟ ಕಾಯಿಯನ್ನು ನಿನ್ನೆ ಸಂಜೆ ಆಟವಾಡುತ್ತಿರುವಾಗ ಮಕ್ಕಳು ತಿಂದಿದ್ದರು.
ಕಾಯಿ ತಿಂದು ಅಸ್ವಸ್ಥಗೊಂಡ ಮಕ್ಕಳ ಪೈಕಿ ಕೆಲವರಿಗೆ ವಾಂತಿಯಾಗಿದೆ. ಕೂಡಲೇ ಮಕ್ಕಳನ್ನು ಮದ್ದೂರು ಸರ್ಕಾರಿ ಆಸ್ಪತ್ರೆಗೆ ಪೋಷಕರು ಕರೆದುಕೊಂಡು ಬಂದಿದ್ದಾರೆ. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.