ಮೈಸೂರು: ಸಮಾಜವಾದಿ ಮನಸ್ಸುಳ್ಳ ಸಿದ್ದರಾಮಯ್ಯನವರು ಮಣ್ಣಿಗೋಸ್ಕರ ಆಸೆ ಪಡುತ್ತಿದ್ದಾರೆ. ಕೂಡಲೇ ಕೆಸರೆಯಲ್ಲಿರುವ 3 ಎಕರೆ 16 ಗುಂಟೆ ಜಮೀನನ್ನು ಸರಕಾರಕ್ಕೆ ವಾಪಸ್ ನೀಡಲಿ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ”ಸಿಎಂ ತಮ್ಮ ಜಮೀನನ್ನು ವಿಶೇಷ ಮಕ್ಕಳ ಶಾಲೆ, ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಹಸ್ತಾಂತರಿಸಬೇಕು.
ಇದರಿಂದ ಸಿದ್ದರಾಮಯ್ಯ ಅವರ ವ್ಯಕ್ತಿತ್ವವೂ ಹೆಚ್ಚುತ್ತದೆ. ಮುಡಾದಲ್ಲಿ ಸಾವಿರಾರು ಕೋಟಿ ರೂ. ಹಗರಣ ನಡೆದಿದೆ. ಈ ಹಗರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಅವರಿಗೆಲ್ಲ ಶಿಕ್ಷೆಯಾಗಬೇಕು. ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇಲ್ಲದಿದ್ದರೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವೆ,” ಎಂದು ಹೇಳಿದರು.
‘ಸಿದ್ದರಾಮಯ್ಯ ಅವರು ಮಣ್ಣಿನ ಆಸೆಗೆ ಸಿಲುಕಿದ್ದಾರೆ. ಜಮೀನಿಗೆ 62 ಕೋಟಿ ರೂ. ಕೊಡಬೇಕಲ್ಲವೇ ಎಂದು ಕೇಳುತ್ತಿದ್ದಾರೆ. ಭೂಮಿ ಅಭಿವೃದ್ಧಿ ಮಾಡಿದ ಮೇಲೆ ಉಳಿಯುವುದು ಶೇ 40ರಷ್ಟು ಮಾತ್ರ. ಹಣಕಾಸು ಖಾತೆಯವರಿಗೆ ಇಷ್ಟು ಗೊತ್ತಾಗುವುದಿಲ್ಲವೇ?,” ಎಂದು ಪ್ರಶ್ನಿಸಿದರು.