ಹಾಸನ:- ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಳ್ಳಿ ಗ್ರಾಮದಲ್ಲಿ ಬಾಲಕಿ ಡೆಂಗ್ಯೂಗೆ ಬಲಿಯಾದ ಘಟನೆ ಜರುಗಿದೆ.
ಗ್ರಾಮದ ರಮೇಶ್-ಅಶ್ವಿನಿ ದಂಪತಿಯ ಪುತ್ರಿ ಸಮೃದ್ಧಿ (8) ಮೃತಪಟ್ಟ ಬಾಲಕಿ. ಕಳೆದ ಮೂರ್ನಾಲ್ಕು ದಿನಗಳಿಂದ ಈಕೆ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಮೂರು ದಿನದ ಹಿಂದೆ ಹಿಮ್ಸ್ಗೆ ದಾಖಲಾಗಿದ್ದಳು. ಬಾಲಕಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಮೈಸೂರಿನ ಅಪೋಲೊ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಮೃದ್ಧಿ ಸಾವನ್ನಪ್ಪಿದ್ದಾಳೆ.
ಇದರಿಂದ, ಒಂದು ವಾರದಲ್ಲಿ ಹಾಸನ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯುವಿಗೆ ನಾಲ್ವರು ಬಾಲಕಿಯರು ಬಲಿಯಾದಂತಾಗಿದೆ. ಹೊಳೆನರಸೀಪುರ ತಾಲ್ಲೂಕಿನಲ್ಲೇ ಮೂವರು ಬಾಲಕಿಯರು ಮೃತಪಟ್ಟಿದ್ದಾರೆ. ಅರಕಲಗೂಡು ಮೂಲದ ಒಂದು ಹಾಗು ಹೊಳೆನರಸೀಪುರ ಮೂಲದ ಮೂರು ಕಂದಮ್ಮಗಳು ಸಾವಿಗೀಡಾಗಿವೆ. ಮೂರೂ ಮಕ್ಕಳೂ ತೀವ್ರ ಜ್ವರದಿಂದ ಬಳಲಿದ್ದವು. ಜುಲೈ 1ರಂದು ಅರಕಲಗೂಡು ಮೂಲದ ಅಣ್ಣಪ್ಪಶೆಟ್ಟಿ ಹಾಗು ಪದ್ಮ ದಂಪತಿ ಪುತ್ರಿ ಅಕ್ಷತಾ (13) ಸಾವಿಗೀಡಾಗಿದ್ದಾಳೆ. ಜೂನ್ 30ರಂದು ಹೊಳೆನರಸೀಪುರ ತಾಲ್ಲೂಕಿನ ಹಳ್ಳಿ ಮೈಸೂರು ಮೂಲದ ವರ್ಷಿಕಾ(8) ತೀವ್ರ ಜ್ವರದಿಂದ ಬಳಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ
ಬುಧವಾರ ಹೊಳೆನರಸೀಪುರ ತಾಲ್ಲೂಕಿನ ಕಲಾಶ್ರೀ ಜಿ.ಎಲ್ (11) ನಿಧನ ಹೊಂದಿದ್ದಾಳೆ. ಈಕೆ ಹೊಳೆನರಸೀಪುರ ತಾಲ್ಲೂಕಿನ ಗುಡ್ಡೇನಹಳ್ಳಿ ಗ್ರಾಮದ ಲೋಕೇಶ್ ಮತ್ತು ತನುಜ ಎಂಬವರ ಪುತ್ರಿ.
ಪುಟ್ಟ ಮಕ್ಕಳ ಪ್ರಾಣಕ್ಕೆ ಡೆಂಗ್ಯು ಕಂಟಕವಾಗುತ್ತಿದೆ ಎಂಬ ಭೀತಿ ಎದುರಾಗುತ್ತಿದೆ. ಮಕ್ಕಳು ಹಗಲು ಹೊರಗಡೆ ನಿರ್ಬೀತಿಯಿಂದ ಆಟವಾಡುತ್ತಾರೆ. ಡೆಂಗ್ಯು ಹರಡುವ ಸೊಳ್ಳೆಗಳು ಹಗಲಿನಲ್ಲಿ ಸಕ್ರಿಯವಾಗಿದ್ದು, ಬಯಲಿನಲ್ಲಿ ಸುಲಭವಾಗಿ ಸಿಗುವ ಮಕ್ಕಳನ್ನು ಕಚ್ಚುತ್ತಿವೆ. ಹೀಗಾಗಿ ಮಕ್ಕಳಲ್ಲಿ ಡೆಂಗ್ಯು ಪೀಡಿತರು ಜಾಸ್ತಿ ಎಂದು ತರ್ಕಿಸಲಾಗಿದೆ.
ಜ್ವರ ತೀವ್ರಗೊಂಡ ಬಳಿಕ ಮಕ್ಕಳು ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಜ್ವರದಿಂದ ಬಳಲಿದ ಮಕ್ಕಳ ಸರಣಿ ಸಾವಿನಿಂದ ಆತಂಕ ಹೆಚ್ಚಿದೆ. ಜಿಲ್ಲೆಯಲ್ಲಿ 205 ಜನರಿಗೆ ಡೆಂಗ್ಯು ಜ್ವರ ದೃಡಪಟ್ಟಿದೆ. ಸುಮಾರು 6204 ಜನರಿಗೆ ಡೆಂಗ್ಯು ಲಕ್ಷಣಗಳು ಕಾಣಿಸಿಕೊಂಡಿವೆ. ಜ್ವರ, ಮೈ ಕೈ ನೋವು ಸೇರಿ ಡೆಂಗ್ಯು ಲಕ್ಷಣ ಇರುವ ಆರು ಸಾವಿರ ಜನರ ರಕ್ತದ ಮಾದರಿ ಸಂಗ್ರಹಿಸಲಾಗಿದೆ