ಮುಂಬೈ: ಟಿ20 ವಿಶ್ವಕಪ್ (T20 World Cup) ವಿಜೇತ ಟೀಂ ಇಂಡಿಯಾದ (Team India) ವಿಕ್ಟರಿ ಪೆರೇಡ್ಗೆ ಕ್ಷಣಗಣನೆ ಶುರುವಾಗಿದೆ. ವಿಶ್ವ ವಿಜೇತರನ್ನು ಅಭಿನಂದಿಸಲು (Team India victory parade) ಮುಂಬೈ ನಗರಿ ಸಿದ್ಧವಾಗಿ ನಿಂತಿದೆ. ಆದ್ರೆ ಅಭಿಮಾನಿಗಳ ಸಂಭ್ರಮಕ್ಕೆ ವರುಣ ತಡೆಯೊಡ್ಡಿದೆ.
T20 World Cup: ಪ್ರಧಾನಿ ಮೋದಿ ಜೊತೆಗಿನ ಪೋಟೋ ಹಂಚಿಕೊಂಡ ಟೀಮ್ ಇಂಡಿಯಾ
ಸದ್ಯ ಮುಂಬೈನಲ್ಲಿ ವರುಣ ಸಿಂಚನವಾಗುತ್ತಿದ್ದು, ವಾಂಖೆಡೆ ಕ್ರೀಡಾಂಗಣದಲ್ಲಿ ಭಾರೀ ಮಳೆಯಾಗುತ್ತಿದೆ. ಆದ್ರೆ ಅಭಿಮಾನಿಗಳು ಮಳೆಗೂ ಜಗ್ಗದೇ ಮೈದಾನದಲ್ಲೇ ನಿಂತಿದ್ದಾರೆ. ಕೆಲವರಂತೂ ಮಳೆಯಲ್ಲೇ ನೆನೆದುಕೊಂಡು ಟೀಂ ಇಂಡಿಯಾ ಪರ ಘೋಷಣೆ ಕೂಗುತ್ತಿದ್ದಾರೆ. ಆಟಗಾರರು ಈಗಾಗಲೇ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಈ ವಿಜಯಯಾತ್ರೆಯನ್ನು ಸ್ಟಾರ್ ಸ್ಪೋರ್ಟ್ಸ್ ನೇರ ಪ್ರಸಾರ ಮಾಡುವುದಾಗಿ ಘೋಷಿಸಿದೆ.
ವಿಜಯಯಾತ್ರೆಗೆ ಹಿಟ್ಮ್ಯಾನ್ ಆಹ್ವಾನ:
ಮುಂಬೈನವರೇ ಆಗಿರುವ ನಾಯಕ ರೋಹಿತ್ ಶರ್ಮಾ ತಮ್ಮ ತವರಿನ ಅಭಿಮಾನಿಗಳಿಗೆ ಈ ಬೃಹತ್ ಮೆರವಣಿಯಲ್ಲಿ ಪಾಲ್ಗೊಳ್ಳುವಂತೆ ವಿಶೇಷವಾಗಿ ಮನವಿ ಮಾಡಿದ್ದರು. ಭಾರತಕ್ಕೆ ಬರುವ ಮುನ್ನವೇ ರೋಹಿತ್ ‘ಇಂತಹ ವಿಶೇಷ ಸಂಭ್ರಮವನ್ನು ನಿಮ್ಮೊಂದಿಗೆ ಆಚರಿಸುವ ಬಯಕೆಯಿದೆ. ಮರೈನ್ ಡ್ರೈವ್ ಹಾಗೂ ವಾಂಖೇಡೆ ಕ್ರೀಡಾಂಗಣದಲ್ಲಿ ನಮ್ಮೊಂದಿಗೆ ನೀವೂ ಜತೆಯಾಗಿ’ ಎಂದು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈಗಾಗಲೇ ಅಭಿಮಾನಿಗಳು ಟೀಂ ಇಂಡಿಯಾ ಜೆರ್ಸಿ ತೊಟ್ಟು ಸ್ಟೇಡಿಯಂಗೆ ಆಗಮಿಸಿದ್ದಾರೆ.
ಆಟಗಾರರು ಮುಂಬೈಗೆ ತಲುಪಿದೊಡನೆ ‘ಮುಂಬೈನ ನರೀಮನ್ ಪಾಯಿಂಟ್ನಿಂದ ಸರಿಯಾಗಿ 5 ಗಂಟೆಗೆ ರೋಡ್ ಶೋ ಆರಂಭವಾಗಲಿದೆ. ಅದಾದ ಮೇಲೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಟಗಾರರನ್ನು ಮತ್ತು ಮತ್ತು ಸಿಬ್ಬಂದಿ ಬಳಗವನ್ನು ಸನ್ಮಾನಿಸಲಾಗುತ್ತದೆ. ಇದಾದ ಬಳಿಕ ಬಿಸಿಸಿಐ ಘೋಷಿಸಿರುವ 125 ಕೋಟಿ ರೂ. ಬಹುಮಾನ ಮೊತ್ತ ಕೂಡ ಪ್ರದಾನ ಮಾಡಲಾಗುತ್ತದೆ.