ಮೈಸೂರು: ಪ್ರತಿಯೊಂದು ಜೀವ ಅಮೂಲ್ಯವಾಗಿದ್ದು ಅತಿವೃಷ್ಟಿಯಿಂದ ಯಾವುದೇ ಪ್ರಾಣ ಹಾಗೂ ಆಸ್ತಿ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹಾನಿಯನ್ನು ತಡೆಗಟ್ಟಲು ಅಧಿಕಾರಿಗಳು ಸಜ್ಜಾಗಬೇಕು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ಅವರು ಪ್ರಾದೇಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೈಸೂರು ವಿಭಾಗದ ಕಂದಾಯ ಇಲಾಖೆಯ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಮಳೆಯಿಂದ ಪ್ರಾಣ ಹಾಗೂ ಆಸ್ತಿ ಹಾನಿ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಇನ್ನೂ ಹೆಚ್ಚು ಮಳೆ ಆದರೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಗುರುತಿಸಿಕೊಂಡಿರಬೇಕು ಎಂದರು. ಕಂದಾಯ ಇಲಾಖೆಯು ಮಾತೃ ಇಲಾಖೆಯಾಗಿದ್ದು, ಕಂದಾಯ ಇಲಾಖೆಯಲ್ಲಿ ಹೆಚ್ಚು ಹೆಚ್ಚು ಅರ್ಜಿಗಳು ವಿಲೇವಾರಿ ಆಗಿದ್ದರೂ ಸಹ ಹೆಚ್ಚು ಬಾಕಿ ಕಂದಾಯ ಇಲಾಖೆಯಲ್ಲಿಯೇ ಇವೆ. ಕಂದಾಯ ಇಲಾಖೆಯು ಕಾಲ ಕಾಲಕ್ಕೆ ಬರುವ ಹೊಸ ಹೊಸ ಯೋಜನೆಗಳ ಜಾರಿ ಜವಾಬ್ಧಾರಿ ಕಂದಾಯ ಇಲಾಖೆಯ ಮೇಲೆಯೇ ಬರುತ್ತದೆ.
ಆದರೂ ಸಹ ಜನರು ಕಂದಾಯ ಇಲಾಖೆಯ ಮೇಲೆ ಹೆಚ್ಚುಅವಲಂಬಿತರಾಗಿರುತ್ತಾರೆ. ಜನರಿಗೆ ಸಕಾಲದಲ್ಲಿ ಕೆಲಸ ಮಾಡಿ ಅವರ ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಇಲಾಖೆಯ ಪ್ರಮುಖ ಜವಾಬ್ಧಾರಿ ಆಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಈ ಹಿಂದೆ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಿದ್ದರೆ ಈಗ ಕಾರ್ಯದ ಒತ್ತಡ ಹೆಚ್ಚಾಗುತ್ತಾ ಇರಲಿಲ್ಲ. ಕಾನೂನಿನ ಅಡಿಯಲ್ಲಿ ಸಮಾಜದ ಸಾರ್ವಜನಿಕರ ಹಿತದೃಷ್ಟಿಯಿಂದ ಮಾಡಬೇಕಾದ ಕಾರ್ಯಗಳೇ ಆಗಿವೆ ಎಂದು ಮಾಹಿತಿ ನೀಡಿದರು.
Yuvanidhi Yojana: ಫಲಾನುಭವಿಗಳೇ ಗಮನಿಸಿ.. ಯುವನಿಧಿ ಯೋಜನೆಗೆ ಹೊಸ ರೂಲ್ಸ್..! ಈ ಕೆಲಸ ಮಾಡದಿದ್ರೆ ಹಣ ಬರಲ್ಲ
ರಾಜ್ಯದಲ್ಲಿ 24 ಲಕ್ಷ ಮಲ್ಟಿ ಓನರ್ ಆರ್ ಟಿ ಸಿ ಗಳು ಇವೆ. ಇದರಲ್ಲಿ 2 ಲಕ್ಷ ಸರ್ಕಾರದ ಸ್ವತ್ತಿನ ಮಲ್ಟಿ ಓನರ್ ಆರ್.ಟಿ. ಸಿ ಗಳು ಇವೆ. ಇವನ್ನೂ ಈ ಹಿಂದೆಯಿಂದಲೂ ಬಗೆಹರಿಸದೆ ಹಾಗೆ ಬಿಟ್ಟುಕೊಂಡು ಬಂದಿದ್ದೇವೆ. 50 ಲಕ್ಷ ಪ್ಲಾಟ್ ಗಳು ಕೃಷಿಯಿಂದ ಬೇರೆ ಉದ್ದೇಶಕ್ಕೆ ಕನ್ವರ್ಟ್ ಆಗಿದೆ ಆದರೆ ದಾಖಲೆಗಳಲ್ಲಿ ಈಗಲೂ ಕೃಷಿ ಭೂಮಿ ಎಂದು ಇದೆ. ಇದು ಕಾಲ ಕಾಲಕ್ಕೆ ಬದಲಾವಣೆ ಆಗಿದ್ದರೆ ಈಗ ಒತ್ತಡ ಆಗುತ್ತಿರಲಿಲ್ಲ. ಆದ್ದರಿಂದ ಇದು ನಮ್ಮ ಜವಾಬ್ದಾರಿ ಆಗಿದ್ದು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿ ಎಂದು ಸೂಚಿಸಿದರು.
ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆ ಆಗುತ್ತದೆ. ಈಗಾಗಲೇ ಮಳೆಯಿಂದ 20 ಸಾವು ಸಂಬಂಧಿಸಿದೆ. ವಿಪತ್ತು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಿ ಸಾವು ನೋವು ಆಗದಂತೆ ನೋಡಿಕೊಳ್ಳಬೇಕು. ಕಳೆದ ಬಾರಿ ಬರ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದೀರಿ. ಹಾಗೆಯೇ ಈಗ ಹೆಚ್ಚು ಮಳೆಯಿಂದ ಆಗುವ ಅನಾಹುತಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ. ಇನ್ನೂ ಮುಂದೆ ವಿಪತ್ತಿನಿಂದ ಒಂದೇ ಒಂದು ಸಾವು ಆಗದಂತೆ ನೋಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.