ಬೆಂಗಳೂರು: ಟ್ವಿಟ್ಟರ್ಗೆ ಪರ್ಯಾಯವಾಗಿ ಆರಂಭಗೊಂಡಿದ್ದ ಕೂ ಬಾಗಿಲು ಹಾಕಿದೆ. ದೇಶೀಯ ಸಾಮಾಜಿಕ ಜಾಲತಾಣ ವೇದಿಕೆ ಕೂ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ. ಸ್ವಾಧೀನ ಮಾತುಕತೆ ವಿಫಲ ಮತ್ತು ಹೆಚ್ಚಿನ ತಂತ್ರಜ್ಞಾನದ ವೆಚ್ಚಗಳಿಂದ ಕೂ ವೇದಿಕೆಯನ್ನು ಮುಚ್ಚುವುದಾಗಿ ಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ ಮತ್ತು ಮಯಾಂಕ್ ಅವರು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಅಪ್ರಮೇಯ ರಾಧಾಕೃಷ್ಣ ಮತ್ತು ಮಯಂಕ್ ಬಿಡವಾಟ್ಕ ಎಂಬುವವರು 2020ರಲ್ಲಿ ಆರಂಭಿಸಿದ ಕೂ ಆ್ಯಪ್ ಅಂದಿನ ಟ್ವಿಟ್ಟರ್ಗೆ ಪರ್ಯಾಯವೆಂಬಂತೆ ಬಿಂಬಿತವಾಗಿತ್ತು. ಆರಂಭದಲ್ಲೇ ಬಹಳಷ್ಟು ಜನಪ್ರಿಯತೆ ಕೂಡ ಗಳಿಸಿತ್ತು. ಕೂ ಬಿಡುಗಡೆ ಆಗಿ ಕೆಲವೇ ದಿನಗಳಲ್ಲಿ ಲಕ್ಷಾಂತರ ಜನರು ಆ್ಯಪ್ ಡೌನ್ಲೋಡ್ ಮಾಡಿದ್ದರು. ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಇದು ಲಭ್ಯ ಇದ್ದರಿಂದ ಬಹಳ ನಿರೀಕ್ಷೆ ಇತ್ತು.
Yuvanidhi Yojana: ಫಲಾನುಭವಿಗಳೇ ಗಮನಿಸಿ.. ಯುವನಿಧಿ ಯೋಜನೆಗೆ ಹೊಸ ರೂಲ್ಸ್..! ಈ ಕೆಲಸ ಮಾಡದಿದ್ರೆ ಹಣ ಬರಲ್ಲ
ಆದರೆ, ಎಷ್ಟೇ ತಂತ್ರಜ್ಞಾನ ಬೆಂಬಲ ಇದ್ದರೂ ಸೋಷಿಯಲ್ ಮೀಡಿಯಾ ತಾಣವನ್ನು ಒಂದು ಹಂತಕ್ಕೆ ಕೊಂಡೊಯ್ಯಲು ಐದಾರು ವರ್ಷವಾದರೂ ಬೇಕಾಗುತ್ತದೆ. ಸ್ಥಾಪನೆಯಾದ ಎರಡು ವರ್ಷದಲ್ಲಿ ಲಾಭದ ನಿರೀಕ್ಷೆ ಮಾಡಲು ಆಗುವುದಿಲ್ಲ ಎಂದು ಅಪ್ರಮೇಯ ಅವರು ಹೇಳಿದ್ದಾರೆ. ಕೂ ಅನ್ನು ಮುನ್ನಡೆಸಲು ಆಗುವುದಿಲ್ಲ ಎಂದು ಗೊತ್ತಾದ ಬಳಿಕ ಅಪ್ರಮೇಯ ಅವರು ಮಾರಲು ಯೋಜಿಸಿದ್ದರು.
ಡೈಲಿಹಂಟ್ ಸೇರಿದಂತೆ ಹಲವು ದೊಡ್ಡ ಇಂಟರ್ನೆಟ್ ಕಂಪನಿಗಳು, ಕಾರ್ಪೊರೇಟ್ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದ್ದರು. ಆದರೆ, ಸೋಷಿಯಲ್ ಮೀಡಿಯಾದಂಥ ಕಂಪನಿಯನ್ನು ಇಟ್ಟುಕೊಳ್ಳಲು ಯಾರೂ ಆಸಕ್ತಿ ತೋರಲಿಲ್ಲ. ಒಂದೆರಡು ಕಂಪನಿಗಳು ಕೊನೆಯ ಘಳಿಗೆಯಲ್ಲಿ ಮನಸು ಬದಲಾಯಿಸಿದವು. ಅಂತಿಮವಾಗಿ ತಾವು ಕೂ ಅನ್ನು ಖಾಯಂ ಆಗಿ ಮುಚ್ಚುವ ಕಠಿಣ ನಿರ್ಧಾರಕ್ಕೆ ಬರಬೇಕಾಯಿತು ಎಂದು ಹೇಳಿಕೊಂಡಿದ್ದಾರೆ ಅಪ್ರಮೇಯ ರಾಧಾಕೃಷ್ಣ.
ಆದರೆ, ಕೂ ಸಾಹಸ ಬಗ್ಗೆ ಅಪ್ರಮೇಯ ಬಹಳ ಹೆಮ್ಮೆ ಹೊಂದಿದ್ದಾರೆ. ಕೂ ಬಹಳ ಉತ್ಕೃಷ್ಟವಾದ ಉತ್ಪನ್ನ. ಬಹಳ ಇಷ್ಟ ಪಟ್ಟು ಕಟ್ಟಿದ ಆ್ಯಪ್ ಅದು. ಭಾರತದಲ್ಲಿ ಯಾರಾದರೂ ಸೋಷಿಯಲ್ ಮೀಡಿಯಾ ಕಂಪನಿ ಆರಂಭಿಸುವ ಆಲೋಚನೆ ಇದ್ದರೆ ಖಂಡಿತವಾಗಿ ನನ್ನ ಅನುಭವದ ನೆರವು ಒದಗಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.