ಬೆಳಗಾವಿ: ಆಸ್ತಿಗಾಗಿ ಮಾಟ ಮಂತ್ರ ಮಾಡಿದ್ದಾರೆ ಎಂದು ಆರೋಪಿಸಿ ಖ್ಯಾತ ಉದ್ಯಮಿ ಡಾ.ವಿಜಯ ಸಂಕೇಶ್ವರ ಪುತ್ರಿ, ಮಾಜಿ ಸಂಸದ ಎಸ್.ಬಿ ಸಿದ್ನಾಳರ ಕಿರಿಯ ಸೊಸೆ ದೀಪಾ ಸಿದ್ನಾಳ ಅವರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಮಾಜಿ ಸಂಸದ ಎಸ್.ಬಿ ಸಿದ್ನಾಳ ಕಿರಿಯ ಸೊಸೆ, ಖ್ಯಾತ ಉದ್ಯಮಿ ಡಾ.ವಿಜಯ ಸಂಕೇಶ್ವರ ಅವರ ದ್ವಿತೀಯ ಪುತ್ರಿ ದೀಪಾ ಅವರು ಬೆಳಗಾವಿ ನಗರದ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ವಿಜಯಕಾಂತ ಹಾಲಿನ ಡೇರಿ ಕಬಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ವಿಜಯಕಾಂತ ಹಾಲಿನ ಡೇರಿಯನ್ನು ವಿಜಯ ಸಂಕೇಶ್ವರ್ ಹಾಗೂ ಶಿವಕಾಂತ ಸಿದ್ನಾಳ ಪಾಲುದಾರಿಕೆಯಲ್ಲಿ ಆರಂಭ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಶಿವಕಾಂತ ಮೃತಪಟ್ಟದ್ದರು. ಸದ್ಯ ಶಿವಕಾಂತ ಸಾವಿನ ಬಳಿಕ ಸಮಾಧಿ ಬಳಿ ಮಾಟಮಂತ್ರ ಮಾಡಿಸಿರುವ ಆರೋಪ ಕೇಳಿಬಂದಿದೆ.
ಈ ಬಗ್ಗೆ ಎಫ್ಐಆರ್ನಲ್ಲಿ ಮಾಟಮಂತ್ರದ ಬಗ್ಗೆ ಉಲ್ಲೇಖ ಮಾಡಿ ಮೃತ ಶಿವಕಾಂತರ ಸಂಬಂಧಿಕರ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆಯಂತೆ. ಎಫ್ ಐಆರ್ ನಲ್ಲಿ ಸಹೋದರ ಶಶಿಕಾಂತ ಸಿದ್ನಾಳ, ಪತ್ನಿ ವಾಣಿ ಸಿದ್ನಾಳ, ಪುತ್ರ ದಿಗ್ವಿಜಯ ಸಿದ್ನಾಳ ವಿರುದ್ಧ ಮಾಟಮಂತ್ರದ ಗಂಭೀರ ಆರೋಪ ಮಾಡಲಾಗಿದೆ. ಈ ಸಂಬಂಧ ಐಪಿಸಿ 1860, ಸೆಕ್ಷನ್ 120ಬಿ, 506, 307, Black magic act 2007 ಅಡಿಯಲ್ಲಿ ದೂರು ದಾಖಲಾಗಿದೆ.