ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಾಖಲೆಯ ಮಳೆ ಸುರಿದಿದ್ದು, ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ಮೃತಪಟ್ಟವರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರವನ್ನು ದೆಹಲಿ ಸರ್ಕಾರವು ಘೋಷಿಸಿದೆ.
ಕಂದಾಯ ಇಲಾಖೆಗೆ ಅಧಿಕೃತ ಸಂವಹನದಲ್ಲಿ ದೆಹಲಿ ಹಣಕಾಸು ಸಚಿವ ಅತಿಶಿ, ಜೂನ್ 28 ರಂದು ಸುರಿದ ವಿಪರೀತ ಮಳೆಗೆ ಸಾವು-ನೋವುಗಳು ಸಂಭವಿಸಿದೆ. ಹೀಗಾಗಿ ಭಾರೀ ಮಳೆಗೆ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರವನ್ನು ನೀಡುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಅತಿಶಿ ತಮ್ಮ ಎಕ್ಸ್ ಖಾತೆಯಲ್ಲಿ, ಜೂನ್ 28 ರಂದು ಹಲವು ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿವೆ. 24 ಗಂಟೆಗಳಲ್ಲಿ 228 ಮಿ.ಮೀ ತೀವ್ರ ಮಳೆಯ ನಂತರ, ಪ್ರಾಣ ಕಳೆದುಕೊಂಡ ಎಲ್ಲರ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಾಗುವುದು. ಈ ಪರಿಹಾರವು ಮೃತರ ಕುಟುಂಬಗಳಿಗೆ ತ್ವರಿತವಾಗಿ ತಲುಪುತ್ತದೆ ಎಂದು ಭರವಸೆ ನೀಡಿದರು.